ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್, ಕಳೆದ 5 ವರ್ಷದಲ್ಲಿ 26 ಜಿಲ್ಲೆಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ 42 ಎಕರೆ ಜಾಗ ನೀಡಿದ್ದರು ಎಂದು ಟಿಡಿಪಿ ನಾಯಕ ಲೋಕೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್, ವೈಎಸ್ಆರ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಜಾಗವನ್ನು 33 ವರ್ಷದ ಅವಧಿಗೆ ಕೇವಲ 1000 ರೂ. ಲೀಸ್ ನೀಡಲಾಗಿದೆ. ಈ ಜಾಗದ ಮೊತ್ತದ 600 ಕೋಟಿ ರು. ಇದೆ. ಇಷ್ಟು ಹಣದಲ್ಲಿ 4,200 ಬಡವರಿಗೆ ಒಂದು ಸೆಂಟ್ ಭೂಮಿ ಸುಲಭವಾಗಿ ಹಂಚಬಹುದಿತ್ತು ಎಂದು ಹೇಳಿದ್ದಾರೆ. ಇನ್ನು ವಿಶಾಖಪಟ್ಟಣಂನಲ್ಲಿ ಜಗನ್ ನಿರ್ಮಿಸಿದ ಅರಮನೆ ರೀತಿಯ 500 ಕೋಟಿ ರು. ಮೌಲ್ಯದ್ದಾಗಿದೆ. ಇಷ್ಟು ಮೊತ್ತದ ಬಂಗಲೆ ಹಣದಲ್ಲಿ 25 ಸಾವಿರ ಬಡವರಿಗೆ ಮನೆ ನಿರ್ಮಿಸಿಕೊಡಬಹುದಿತ್ತು ಎಂದು ಹೇಳಿದ್ದಾರೆ.
ಇನ್ನು ಆಂಧ್ರಪ್ರದೇಶದಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದ ಬಳಿಕ ವೈಎಸ್ಆರ್ ಕಾಂಗ್ರೆಸ್ನ ಮತ್ತೊಂದು ಕಟ್ಟಡಕ್ಕೆ ಸಂಚಕಾರ ಎದುರಾಗಿದೆ. ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್ಆರ್ ಕಾಂಗ್ರೆಸ್ ಕಚೇರಿಯನ್ನು ಶನಿವಾರ ಸ್ಥಳೀಯ ಆಡಳಿತ ನೆಲಸಮ ಗೊಳಿಸಿತ್ತು. ಅದರ ಬೆನ್ನಲ್ಲೇ ಗ್ರೆಟರ್ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಎನೆಡ ಗ್ರಾಮ ಮತ್ತು ಅನಕ ಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೂ ನೋಟಿಸ್ ನೀಡಲಾಗಿದೆ. ನೋಟಿಸ್ನಲ್ಲಿ ಅಕ್ರಮ ನಿರ್ಮಾಣ ಕಾರ್ಯವನ್ನು ಶೀಘ್ರವೇ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದ್ದು, ಏಳು ದಿನದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ವೈಎಸ್ಆರ್ ಕಾಂಗ್ರೆಸ್ ರಾಜ್ಯದಲ್ಲಿ 3 ರಾಜಧಾನಿ ನಿರ್ಮಾಣ ಹೊಂದಿದ್ದ ಕಾರಣ ವಿಶಾಖಪಟ್ಟಣಂನದಲ್ಲೂ ತನ್ನ ಪಕ್ಷದ ಬೃಹತ್ ಕಚೇರಿ ನಿರ್ಮಾಣಕ್ಕೆ ಮುಂದಾಗಿತ್ತು.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಗೆದ್ದ ಬೆನ್ನಲ್ಲೇ ಆರಂಭವಾಗಿರುವ ವೈಎಸ್ಆರ್ ಕಾಂಗ್ರೆಸ್ನ ಕಟ್ಟಡಗಳ ಧ್ವಂಸಗಳ ನಡುವೆಯೇ, 4 ಸುದ್ದಿ ವಾಹಿನಿಗಳು ಕೂಡಾ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿವೆ. ಟಿಡಿಪಿ ಗೆದ್ದ ಬಳಿಕ ರಾಜ್ಯದಲ್ಲಿ 4 ಟಿವಿಯ ಪ್ರಸಾರವನ್ನು ಲೋಕಲ್ ಟೇಬಲ್ ಸರ್ವಿಸ್ ಆಪರೇಟರ್ಗಳು ನಿರ್ಬಂಧಿಸಿದ್ದಾರೆ. ಇದರ ಹಿಂದೆ ಟಿಡಿಪಿ ಕೈವಾಡವಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಟ್ರಾಯ್ಗೂ ದೂರು ನೀಡಲಾಗಿದೆ ಎಂದು ಪಕ್ಷದ ಸಂಸದ ಎಸ್. ನಿರಂಜನ್ ರೆಡ್ಡಿ ಹೇಳಿದ್ದಾರೆ.
ಒಟ್ನಲ್ಲಿ ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಗನ್ ಆರೋಪಿಸಿದ್ದಾರೆ. ಇದಕ್ಕೆ ಟಿಡಿಪಿ ಕೂಡ ತಿರುಗೇಟು ಕೊಟ್ಟಿದೆ.




