ಹಿಂದೂ ಹುಲಿ, ಫೈರ್ ಬ್ರ್ಯಾಂಡ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ, ಸಾಲು ಸಾಲು FIR ದಾಖಲಾಗುತ್ತಿವೆ. ಸೆಪ್ಟೆಂಬರ್ 11ರಂದು ಮದ್ದೂರಿನಲ್ಲಿ ಪ್ರಚೋದನಾಕಾರಿ ಭಾಷಣ ಆರೋಪ ಹಿನ್ನೆಲೆ, ಸೆಪ್ಟೆಂಬರ್ 12ರಂದು ಮದ್ದೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮದ್ದೂರಿನ ಬಳಿಕ ತುಮಕೂರಿನಲ್ಲಿ ಮತ್ತೊಂದು FIR ಹಾಕಲಾಗಿದೆ.
ಮದ್ದೂರಿನಲ್ಲಿ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ದೂರಿನನ್ವಯ, ಬಿಎನ್ಎಸ್ ಸೆಕ್ಷನ್ 196(1), 299, 353(2) ಅನ್ಯಕೋಮಿಗೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಡಿ, ಎಫ್ಐಆರ್ ಹಾಕಲಾಗಿತ್ತು.
ಈಗ, ತುಮಕೂರು ನಗರ ಠಾಣೆಯಲ್ಲೂ, ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ದ್ವೇಷಭಾಷಣದ ಆರೋಪದ ಮೇಲೆ ತುಮಕೂರು ನಗರ ಠಾಣೆ ಪೊಲೀಸರು, ಯತ್ನಾಳ್ ವಿರುದ್ಧ ಎಫ್ಐಆರ್ ಹಾಕಿದ್ದಾರೆ.
ಸೆಪ್ಟಂಬರ್ 13ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ, ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ರು. ಅನ್ಯಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು, ಪೊಲೀಸ್ ಸಿಬ್ಬಂದಿ ರಘುನಾಥ್ ದೂರು ಕೊಟ್ಟಿದ್ರು. ಹೀಗಾಗಿ ಪ್ರಚೋದನಕಾರಿ ಭಾಷಣ ಆರೋಪದ ಮೇಲೆ, ಸೆಪ್ಟಂಬರ್ 14ರ ಭಾನುವಾರ ರಾತ್ರಿ, ಕೇಸ್ ಹಾಕಿದ್ದಾರೆ.
ತುಮಕೂರಿನಲ್ಲಿ ಕೇಸ್ ದಾಖಲಾಗುವ ಮೂಲಕ, ಯತ್ನಾಳ್ ಮೇಲೆ ಇದುವರೆಗೆ 71 ಎಫ್ಐಆರ್ ದಾಖಲಾದಂತಾಗಿದೆ. ಮದ್ದೂರಿನಲ್ಲಿ 70ನೇ ಎಫ್ಐಆರ್, ತುಮಕೂರಿನಲ್ಲಿ 71ನೇ ಎಫ್ಐಆರ್ ದಾಖಲಾಗಿದೆ. ಒಟ್ನಲ್ಲಿ, ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಯತ್ನಾಳ್, ಎಫ್ಐಆರ್ ಹಾಕಿಸಿಕೊಳ್ಳುವ ವಿಚಾರದಲ್ಲೂ ದಾಖಲೆ ಬರೆಯಲು ಹೊರಟಿದ್ದಾರೆ. ಫೈರ್ ಬ್ರಾಂಡ್ ಹೊರಟಿರೋ ಸ್ಪೀಡ್ ನೋಡಿದ್ರೆ ಆದಷ್ಟು ಬೇಗ ಎಫ್ಐಆರ್ನಲ್ಲೂ ಯತ್ನಾಳ್ ಅವರು ಸೆಂಚುರಿ ಬಾರಿಸುವ ಸಾಧ್ಯತೆ ಇದೆ.