ರಾಮೇಶ್ವರಂ ಕೆಫೆ ಸ್ಫೋಟದ ಮಾದರಿಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಜೆ.ಪಿ.ನಗರದ ಮನೆಯೊಂದರಲ್ಲಿ ಕುಕ್ಕರ್ ಸ್ಫೋಟಗೊಂಡು, ಶಾರ್ಟ್ ಸರ್ಕಿಟ್ ಆಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.
ದೆಹಲಿಯ 23 ವರ್ಷದ ಮೋಸಿನ್ ಮೃತಪಟ್ಟಿದ್ದು, ಖಾದರ್ ಖಾನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜೆ.ಪಿ.ನಗರದ ಹೇರ್ ಸಲೂನ್ನಲ್ಲಿ ಮೋಸಿನ್ ಹಾಗೂ ಖಾದರ್ ಖಾನ್ ಇಬ್ಬರೂ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಜೆಯಿದ್ದ ಕಾರಣದಿಂದಾಗಿ ಬೆಳಿಗ್ಗೆ ಲೇಟಾಗಿ ಎದ್ದು, 11 ಗಂಟೆ ಸುಮಾರಿಗೆ ಕುಕ್ಕರ್ನಲ್ಲಿ ಅನ್ನ ಮಾಡಲು ಅಕ್ಕಿ ಇಟ್ಟಿದ್ರು. ಈ ವೇಳೆ ಕುಕ್ಕರ್ ಸ್ಪೋಟಗೊಂಡಿದೆ. ಇದೇ ವೇಳೆ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಇಬ್ಬರು ಗಾಯಗೊಂಡರು. ಆದರೆ, ಸಿಲಿಂಡರ್ ಸ್ಪೋಟಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸ್ಫೋಟದ ತೀವ್ರತೆಯಿಂದಾಗಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

