ಮುಂಬೈ: ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ 4 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ 2ನೇ ಸಂತ್ರಸ್ತೆಯ ಹೇಳಿಕೆಯನ್ನು ಯಾಕೆ ದಾಖಲಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಪೊಲೀಸರನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಬ್ಬರು ಅಪ್ರಾಪ್ತ ಬಾಲಕಿಯರ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ.
ಸೆಕ್ಷನ್ 161 ಮತ್ತು 164ರ ಅಡಿಯಲ್ಲಿ ಎರಡನೇ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಬದ್ಲಾಪುರ ಪೊಲೀಸರು ದಾಖಲಿಸದಿರುವುದು ನಮಗೆ ಆತಂಕ ತಂದಿದೆ. ಅಪ್ರಾಅಪ್ತ ಬಾಲಕಿಯರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಸಾರ್ವಜನಿಕರ ಆಕ್ರೋಶವಿಲ್ಲದಿದ್ದರೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪೀಠ ಗಮನಿಸಿದೆ. ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬುದು ಗಮನಕ್ಕೆ ಬಂದಿದ್ದರೂ ಪೊಲೀಸರಿಗೆ ದೂರು ನೀಡದ ಬದ್ಲಾಪುರ ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್ ಸಂತ್ರಸ್ತರಿಗೆ ನ್ಯಾಯ ಒದಗಿಸಿಯೇ ತೀರುತ್ತೇವೆ ಎಂದು ಹೇಳಿದೆ.
ಪ್ರಕರಣದ ಬಗ್ಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನೀವು (ಪೊಲೀಸರು) ಯಾಕೆ ವಿಳಂಬ ಮಾಡಿದ್ದೀರಿ..? ಆಗಸ್ಟ್ 13ರಂದು ಘಟನೆ ನಡೆದಿದ್ದು ಬದ್ಲಾಪುರ ಪೊಲೀಸರು ಆಗಸ್ಟ್ 16ನೇ ತಾರೀಖು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.. ಹೇಳಿಕೆಗಳನ್ನು ದಾಖಲಿಸಲಾಗಿದೆಯೇ..? ಪೋಷಕರ ಹೇಳಿಕೆಗಳನ್ನು ಮೊದಲೇ ಯಾಕೆ ದಾಖಲಿಸಿಕೊಳ್ಳಲಿಲ್ಲ..? ಕಾನೂನಿನ ಪ್ರಕಾರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದು ಪೊಲೀಸರ ಕರ್ತವ್ಯ. ನಿನ್ನೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಬಳಿಕ ಮಧ್ಯರಾತ್ರಿಯ ನಂತರ ತಡವಾಗಿ ಸಂತ್ರಸ್ತರೊಬ್ಬರ ತಂದೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ವಿಭಾಗೀಯ ಪೀಠ ಸಂತ್ರಸ್ತರಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದೆ.
ಶಾಲೆಗಳೇ ಸುರಕ್ಷಿತವಾಗಿಲ್ಲದಿದ್ದರೆ ಶಿಕ್ಷಣ ಹಕ್ಕು ಎಲ್ಲಿ..?
ಮಹಾರಾಷ್ಟ್ರ ಪೊಲೀಸರ ಕರ್ತವ್ಯಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಬದ್ಲಾಪುರ ಶಾಲಾ ಆಡಳಿತ ಮಂಡಳಿಯನ್ನೂ ತರಾಟೆಗೆ ತೆಗೆದುಕೊಂಡಿದೆ. ಶಾಲೆಗಳೇ ಸುರಕ್ಷಿತವಾಗಿಲ್ಲದಿದ್ದರೆ ಶಿಕ್ಷಣದ ಹಕ್ಕಿನ ಬಗ್ಗೆ ಮಾತನಾಡುವುದರಿಂದ ಏನು ಪ್ರಯೋಜನ..? 4 ವರ್ಷದ ಹೆಣ್ಣು ಮಕ್ಕಳನ್ನೂ ಬಿಡುತ್ತಿಲ್ಲ ಅಂದ್ರೆ ಪರಿಸ್ಥಿತಿ ಏನು..? ಇದು ಅತ್ಯಂತ ಆಘಾತಕಾರಿ ಎಂದು ನ್ಯಾಯಮೂರ್ತಿ ಮೋಹಿತೆ ದೇರೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ.