ಬೆಂಗಳೂರಿನ ಮಹದೇವಪುರ ವಲಯ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.

ಹೊರಮಾವು ವಾರ್ಡ್ ನಲ್ಲಿ ನೀರುಗಾಲುಗೆ ಕಾಮಗಾರಿ ಪರಿಶೀಲನೆ:

ಹೊರಮಾವು ವಾರ್ಡ್ ಪೂರ್ವ ಪಾಮ್ ಬೀಚ್ ಅಪಾರ್ಟ್ಮೆಂಟ್ ರಸ್ತೆಯು ಮಳೆಗಾಲದ ವೇಳೆ ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಪೈಕಿ ಸ್ಥಳದಲ್ಲಿರುವ ಕಚ್ಚಾ ಮಳೆ ನೀರುಗಾಲುಗೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಅಗಲೀಕರಣ ಮಾಡಿರುವುದರಿಂದ ಮಳೆಯಾದರೆ ನೀರು ನಿಲ್ಲುವುದು ಕಡಿಮೆಯಾಗಿದೆ. ಇರುವ ಕಚ್ಚಾ ಡ್ರೈನ್ ಅನ್ನು ಪಕ್ಕಾ ಡ್ರೈನ್ ಮಾಡಿ ಈ ಭಾಗದಲ್ಲಾಗುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ರಾಜಕಾಲುವೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ, ಕೂಡಲೆ ತೆರವು ಕಾರ್ಯ ಪ್ರಾರಂಭಿಸಲು ಸೂಚಿಸಿದರು.

ಹೆಳೆ ಮದ್ರಾಸ್ ರಸ್ತೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಭೇಟಿ:

ಕೆ.ಆರ್.ಪುರ ವಾರ್ಡ್ ಹೆಳೆ ಮದ್ರಾಸ್ ರಸ್ತೆ ದುರ್ಗ ಪರಮೇಶ್ವರಿ ದೇವಸ್ಥಾನದ ಬಳಿ ಜಲಾವೃತ ವಾಗುವ ಪ್ರದೇಶವನ್ನು ಪರಿಶೀಲಿಸಿ, ರಸ್ತೆ ಪಕ್ಕದಲ್ಲಿ ಚರಂಡಿ ವಿನ್ಯಾಸವನ್ನು ರಸ್ತೆ ಮಟ್ಟಕ್ಕಿಂತ ಮೇಲೆ ಎತ್ತರಿಸಿದ್ದು, ಶೋಲ್ಡರ್ ಡ್ರೈನ್ ಸರಿಯಾಗಿರದೇ ಇರುವ ಕಾರಣ ರಸ್ತೆಯಲ್ಲಿ ಬೀಳುವ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಈ ಹಿಂದೆ ಹೆಳೆ ಮದ್ರಾಸ್ ರಸ್ತೆಯನ್ನು ಕೆ.ಆರ್.ಡಿ.ಸಿ.ಎಲ್ ನಿರ್ವಹಣೆ ಮಾಡುತ್ತಿತ್ತು. ಇದೀಗ ಪಾಲಿಕೆಗೆ ಹಸ್ತಾಂತರಿಸಿದ್ದು, ಚರಂಡಿ ವಿನ್ಯಾಸವನ್ನು ಬದಲಿಸಿ, ಸರಿಯಾದ ಕಾಲುಗಳನ್ನು ನಿರ್ಮಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಕೆಲವೆಡೆ ಕೊಳಚೆ ನೀರು ಚರಂಡಿಗೆ ಸೇರುತ್ತಿರುವುದನ್ನು ತಿಳಿದು, ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲೆಲ್ಲಿ ಕೊಳಚೆ ನೀರು ಬರುತ್ತೆ ಅದನ್ನೆಲ್ಲಾ ಬ್ಲಾಕ್ ಮಾಡಿ ಚರಂಡಿಗೆ ಕೊಳಚೆ ನೀರು ಬರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎ.ನಾರಾಯಣಪುರ ಕೆರೆ ಅಭಿವೃದ್ಧಿ ಪರಿಶೀಲನೆ:

5 ಎಕರೆ ಪ್ರದೇಶದ ಎ.ನಾರಾಯಣಪುರ ಕೆರೆ(ಮಹದೇವಪುರ ಕೆರೆ 2)ಯ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ, 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯಲ್ಲಿ ಹೂಳೆತ್ತುವುದು, ಸುತ್ತಲು ಕಲ್ಲುಗಳ ಅಳವಡಿಕೆ, ಫೆನ್ಸಿಂಗ್, ವಾಯು ವಿಹಾರ ಮಾರ್ಗ, ಕಿರು ಉದ್ಯಾನ, ಇನ್ಲೆಟ್/ಔಟ್ಲೆಟ್ ಅಭಿವೃದ್ಧಿ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ಇನ್ನಿತರೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಬಾಕಿಯಿರುವ ಸಣ್ಣ-ಪುಟ್ಟ ಕಾಮಗಾರಿಯನ್ನು ಬೇಗ ಮುಗಿಸಬೇಕು. ಕೆರೆಗೆ ನೀರು ಸೇರುವ ಕಾಲುವೆಗೆ ಕಸ/ಪ್ಲಾಸ್ಟಿಂಕ್ ಹಾಕದಂತೆ ಚೈನ್ ಲಿಂಕ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಮಲೂರು ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ:

ಹಳೆ ವಿಮಾನ ನಿಲ್ದಾಣ ರಸ್ತೆ ಯಮಲೂರು ಜಂಕ್ಷನ್ ನಿಂದ ಹೊರ ವರ್ತಲು ರಸ್ತೆಗೆ ಸಂಪರ್ಕ ಕಲ್ಪಿಸುವ 2.9 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿಯನ್ನು 7 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸದರಿ ರಸ್ತೆಯನ್ನು 24 ಮೀಟರ್ ಅಗಲೀಕರಣ ಮಾಡಲಾಗುತ್ತಿದ್ದು, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್, ಆರ್.ಸಿ.ಸಿ ಡ್ರೈನ್, ಡಾಂಬರೀಕರಣ, ಪಾದಚಾರಿ ಮಾರ್ಗಕ್ಕೆ ಕರ್ಬ್ ಸ್ಟೋನ್ ಹಾಗೂ ಟೈಲ್ಸ್ ಅಳವಡಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಹೆಚ್.ಎ.ಎಲ್ ಕೆಳಸೇತುವೆ ಪರಿಶೀಲನೆ:

ಮಾರತಹಳ್ಳಿ ಬಳಿ ರೈಲ್ವೆ ಮೇಲು ಸೇತುವೆಯ ಕೆಳಗೆ ಹೆಚ್.ಎ.ಎಲ್ ಕಡೆಯಿಂದ ಬರುವವರು ರಿಂಗ್ ರಸ್ತೆಗೆ ಯು-ಟರ್ನ್ ತೆಗೆದುಕೊಳ್ಳುವ ಸಲುವಾಗಿ 6 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಈಗಾಗಲೇ ಅರ್ಧಭಾಗ ಫ್ರೀ ಕಾಸ್ಟ್ ಎಲಿಮೆಂಟ್ ಬಾಕ್ಸ್ ಅಳವಡಿಕೆಯಾಗಿದೆ. ಇನ್ನುಳಿದರ್ಧ ಭಾಗದಲ್ಲಿ ಚರ್ಚ್ ಆಸ್ತಿಯನ್ನು ಪಡೆಯುವ ಸಲುವಾಗಿ ಟಿ.ಡಿ.ಆರ್ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಆಸ್ತಿಯನ್ನು ಪಾಲಿಕೆ ವಶಕ್ಕೆ ಪಡೆದ ಕೂಡಲೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕೆಳಸೇತುವೆ ಕಾಮಗಾರಿಯಿಂದ ಈ ಭಾಗದ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಇರುವ ಸಮಸ್ಯೆ ಇತ್ಯರ್ಥಪಡಿಸಕೊಂಡು ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಖಿಗರ ಸೂಚನೆ ನೀಡಿದರು.

ಕುಂದಲಹಳ್ಳಿ ಕೆಳಸೇತುವೆ ಪರಿಶೀಲನೆ:

ಕುಂದಲಹಳ್ಳಿ ಜಂಕ್ಷನ್ ಬಳಿ 19.50 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. 281 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿಯ ಸ್ಥಳದಲ್ಲಿ, 27 ಆಸ್ತಿಗಳ ಪೈಕಿ ಈಗಾಗಲೇ 22 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸರ್ವೀಸ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಬಾಕಿ‌ 4 ಆಸ್ತಿಗಳನ್ನು ಕೂಡಾ ಸ್ವಾಧೀನಪಡಿಸಿಕೊಂಡು 15 ದಿನಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವರ್ತೂರು ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ:

ಸರ್ಜಾಪುರ ರಸ್ತೆಯಿಂದ ಗುಂಜೂರು ಮಾರ್ಗವಾಗಿ ಹೊರ ವರ್ತುಲ ರಸ್ತೆಯವರೆಗಿನ 1.4 ಕಿ‌.ಮೀ ಉದ್ದದ ವರ್ತೂರು ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, 40 ಅಡಿ ರಸ್ತೆಯನ್ನು 100 ಅಡಿಗೆ ರಸ್ತೆ ಅಗಲೀಕರಣ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ವಾಹನ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ತ್ವರಿತವಾಗಿ ಕೆಲಸ ಮಾಡಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ:

ಹೊರಮಾವು ವಾರ್ಡ್ ಜಯಂತಿ ನಗರದ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಪೌಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕ, ಸಹಾಯಕರ ಜೊತೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.

ಪರಿಶೀಲನೆಯ ವೇಳೆ ವಲಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರಾದ ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ಪರಮೇಶ್ವರಯ್ಯ, ಪ್ರಹ್ಲಾದ್, ಬಸವರಾಜ್ ಕಬಾಡೆ, ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author