ರೈತರು ಧಿಕ್ಕಾರ ಕೂಗಲು ಮಾತ್ರ ಸಾಧ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ. ಬಿಡದಿ ಸ್ಮಾರ್ಟ್ ಸಿಟಿ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರು ದಕ್ಷಿಣ ಭಾಗದ ರೈತರು ಪ್ರತಿಭಟನೆಗೆ ಮುಂದಾಗಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಡಿಕೆಶಿ, ಗರಂ ಆಗಿ ರೈತರ ಬಗ್ಗೆ ಕೇವಲವಾಗಿ ಮಾತನಾಡಿದ್ರು. ನೀವು ಧಿಕ್ಕಾರ ಕೂಗಬಹುದಷ್ಟೇ.. ಇನ್ನೇನು ಮಾಡೋಕೆ ಸಾಧ್ಯವಿಲ್ಲ. ಈ ಹೆದರಿಕೆ, ಬೆದರಿಕೆಗೆ ಜಗ್ಗಲ್ಲ. ಏನ್ ಬೇಕಾದ್ರೂ ಮಾಡಿಕೊಳ್ಳಿ. ಹೀಗಂತ ಮಾಗಡಿ ಬಾಲಕೃಷ್ಣ ಎದುರೇ ಗುಡುಗಿದ್ರು.
ರೈತರ ಬಗ್ಗೆ ಡಿಕೆಶಿ ಮಾತಿಗೆ ಬಿಜೆಪಿಗರು ಕೆರಳಿ ಕೆಂಡವಾಗಿದ್ದಾರೆ. ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್. ಅಶೋಕ್, ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ರೈತರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ. ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಸುಳ್ಳು ಅದೆಲ್ಲಾ. ಎಂದು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಿರಿ.
ಈಗ ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ ಎಂದು, ರೈತರ ಅಸಹಾಯಕರು ಅನ್ನುವ ರೀತಿ ಹೀಯಾಳಿಸಿ ಮಾತನಾಡಿದ್ದೀರಿ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು, ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು, ತನ್ನ ಸ್ವಂತಕ್ಕಾಗಿ ಅಲ್ಲ.
ಕೈಗಾರಿಕೆಗಳಿಗೆ, ರೈಲು, ರಸ್ತೆ, ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ರೈತರ ಬಳಿ ಜಮೀನು ಪಡೆಯಲಾಗಿದೆ. ಹೆಚ್ ಎಂಟಿ ಕಾರ್ಖಾನೆ ಬಂದಾಗ ಸ್ವತಃ ನಮ್ಮ ಕುಟುಂಬ ಕೂಡ ಜಮೀನು ನೀಡಿತ್ತು. ಆದರೆ ತಮ್ಮ ಜೀವನದ ಆಧಾರ ಸ್ತಂಭವಾಗಿರುವ ಜಮೀನನ್ನು ಕಳೆದುಕೊಳ್ಳುತ್ತಿರುವ ರೈತರ ಬಳಿ, ಹೇಗೆ ಮಾತನಾಡಬೇಕು? ಯಾವ ರೀತಿ ಸಂವೇದನೆಯಿಂದ ನಡೆದುಕೊಳ್ಳಬೇಕು ಎನ್ನುವ, ಕನಿಷ್ಠ ಸೌಜನ್ಯವೂ ಇಲ್ಲದ ತಮ್ಮಂತಹವರು, ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ನಮ್ಮ ನಾಡಿನ ದುರಂತ.
ರೈತರ ಕಷ್ಟ, ಕೃಷಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗೊತ್ತಿರುವ ನಿಜವಾದ ಒಕ್ಕಲಿಗ ಅನ್ನದಾತರ ಬಗ್ಗೆ ಈ ರೀತಿಯ ದರ್ಪದ ಮಾತುಗಳನ್ನು ಎಂದಿಗೂ ಆಡುವುದಿಲ್ಲ. ಒಕ್ಕಲಿಕೆಯನ್ನು, ಮಣ್ಣಿನ ಮಕ್ಕಳನ್ನು ಅಪಮಾನ ಮಾಡುತ್ತಿರುವ ತಮ್ಮ ಈ ದುರ್ನಡತೆಯ ಪರಿಣಾಮ ಮುಂದೆ ಗೊತ್ತಾಗಲಿದೆ. ಹೀಗಂತ ಟ್ವಿಟ್ಟರ್ ಪೋಸ್ಟ್ ಮೂಲಕ ಆರ್. ಅಶೋಕ್ ಟೀಕಿಸಿದ್ದಾರೆ.