ಫೇಸ್ ಬುಕ್ ಗೆಳತಿಯಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗುವಂತೆ ಈಗಾಗಲೇ ವರ್ತೂರು ಗೆ 2 ನೋಟೀಸ್ ಕೂಡ ಬಂದಿದ್ದು, ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ವರ್ತೂರು ಪ್ರಕಾಶ್ಗೆ ಹೀಗೆ ಸಂಕಷ್ಟ ಎದುರಾಗೋಕೆ ಕಾರಣ ಆಗಿದ್ದು ಅವರ ಫೇಸ್ಬುಕ್ ಗೆಳತಿ.. 6 ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ವರ್ತೂರ್ ಪ್ರಕಾಶ್ ಗೆ ಶ್ವೇತಾಗೌಡ ಎಂಬುವರ ಪರಿಚಯವಾಗಿತ್ತು. ತಾನಾಗಿಯೇ ಫ್ರೆಂಡ್ ರಿಕ್ವೆಸ್ಟ್ , ಕಳುಹಿಸಿ ಮಾಜಿ ಸಚಿವರನ್ನ ಸ್ನೇಹದ ಬಲೆಗೆ ಶ್ವೇತಾ ಬೀಳಿಸಿದ್ರು. ಆ ಬಳಿಕ ಫೇಸ್ ಬುಕ್ ಮೆಸೆಂಜರ್ ನಲ್ಲಿ ಪರಸ್ಪರ ಚಾಟಿಂಗ್ ಕೂಡ ಶುರುವಾಗಿತ್ತು.. ಶ್ವೇತಾಳ ನಂಬರ್ ಪಡೆದ ವರ್ತೂರು ಪ್ರಕಾಶ್, ಅದನ್ನು ಗುಲಾಬ್ ಜಾಮೂನ್ ಅನ್ನೋ ಹೆಸರಲ್ಲೂ ಸೇವ್ ಮಾಡಿಕೊಂಡಿದ್ರು.. ಆದ್ರೆ ಈ ಗುಲಾಬ್ ಜಾಮೂನ್ ಮಾಡಿದ ಕೆಲಸದಿಂದ ವರ್ತೂರು ಪ್ರಕಾಶ್ಗೆ ಸಂಕಷ್ಟ ಎದುರಾಗಿದೆ..
ಅಸಲಿಗೆ ಆಗಿದ್ದೇನಂದರೆ, ಶ್ವೇತಾಗೌಡ, ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಶ್ರೀ ಕೃಷ್ಣ ಡೈಮಂಡ್ ಆಂಡ್ ಜ್ಯುವೆಲರಿ ಶಾಪ್ ನಲ್ಲಿ 2.42 ಕೋಟಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ರು.. ಆದ್ರೆ ಹಣ ಕೊಡದೆ ಮಾಲೀಕರಿಗೆ ವಂಚಿಸಿದ್ದಾಳೆ.. ಶ್ವೇತಾಗೌಡ ಕೆಲವೊಂದು ಆಭರಣಗಳನ್ನ ವರ್ತೂರ್ ಪ್ರಕಾಶ್ ಅವ್ರ ಡಾಲರ್ಸ್ ಕಾಲೋನಿ ನಿವಾಸದ ವಿಳಾಸಕ್ಕೆ ತರಿಸಿಕೊಂಡಿದ್ರು ಅನ್ನೋದು ಗೊತ್ತಾಗಿದೆ.. ಈ ಸಂಬಂಧ ಆಭರಣ ಮಳಿಗೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ರು.. ಆರೋಪಿ ಶ್ವೇತಾಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆಳತಿ ಅನ್ನೋದು ಗೊತ್ತಾಗಿದ್ದು, ವಿಚಾರಣೆಗೆ ಬರುವಂತೆ ಪುಲಕೇಶಿ ನಗರ ಪೊಲೀಸರು 2ನೇ ಬಾರಿ ನೋಟಿಸ್ ಕೊಟ್ಟಿದ್ದಾರೆ.
ಈ ಹಿಂದೆಯೂ ವರ್ತೂರು ಪ್ರಕಾಶ್ಗೆ ನೋಟಿಸ್ ಕೊಡಲಾಗಿತ್ತು. ಆದ್ರೆ ವಿಚಾರಣೆಗೆ ಹಾಜರಾಗಿರಲಿಲ್ಲ.. ಇಂದು ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ಅವರ ಮುಂದೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ವರ್ತೂರು ಪ್ರಕಾಶ್ ಕೆಲವೊಂದು ಮಾಹಿತಿ ನೀಡಿದ್ದಾರೆ. ಶ್ವೇತಾಗೌಡ ನನಗೆ ಸಮಾಜ ಸೇವಕಿ ಅಂತ ಪರಿಚಯವಾಗಿದ್ದಳು. ಆದ್ರೆ ಈ ವಂಚನೆಗೂ ತನಗೂ ಯಾವುದೇ ಸಂಬಂಧವಿಲ್ಲ ಅಂದಿದ್ದಾರೆ.
ಅಚ್ಚರಿಯ ವಿಚಾರ ಏನಂದ್ರೆ, ವರ್ತೂರು ಪ್ರಕಾಶ್ ವಿರುದ್ಧವೇ ಸ್ನೇಹಿತೆ ಶ್ವೇತಾ ಗೌಡ ಹೊಸ ಆರೋಪ ಮಾಡಿದ್ದಾರೆ.. ಪ್ರಕಾಶ್ ಅವ್ರೇ ನನ್ನ ಬಳಿ 10 ಲಕ್ಷ ಸಾಲ ಪಡೆದಿದ್ದಾರೆ ಅಂತ ಶ್ವೇತಾ ಆರೋಪಿಸಿದ್ದಾಳೆ. ಮೂರು ಬ್ರೇಸ್ಲೆಟ್, ಒಂದು ಉಂಗುರ ಸೇರಿ, ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಹಾಕಿಸಿಕೊಂಡಿದ್ದರು ಅಂತ ಶ್ವೇತಾ ಆರೋಪಿಸಿದ್ದಾಳೆ. ಶ್ವೇತಾ ಜೊತೆ ತಿರುಪತಿಗೆ ಹೋಗಲು ವರ್ತೂರು ಪ್ರಕಾಶ್ ಟಿಕೆಟ್ ಕೂಡ ಬುಕ್ ಮಾಡಿದ್ದರಂತೆ, ಟಿಕೆಟ್ ಬುಕ್ ಮಾಡಿದ್ದ ಫೋಟೋ ಸಹ ಲಭ್ಯವಾಗಿದೆ… ಸದ್ಯ ಇಬ್ಬರೂ ಸೇರಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆಂದು ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ