ಬೆಂಗಳೂರು : ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಸರ್ಕಾರ ಅಮಾನತುಗೊಳಿಸಿದೆ. ಇನ್ನೂ ಭಾತರ ಸಿಂಧೂ ನದಿಯ ನೀರನ್ನು ತಡೆಹಿಡಿದರೆ, ನೀರಿನ ಬದಲು ಭಾರತೀಯರ ರಕ್ತ ಹರಿಯುತ್ತದೆ ಎಂದು ಬೊಗಳೆ ಬಿಟ್ಟಿದ್ದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಹೈದ್ರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಿಲಾವಲ್ ಭುಟ್ಟೋ ಒಬ್ಬ ಚೈಲ್ಡಿಶ್, ಅವನ ತಾಯಿಯನ್ನು ಭಯೋತ್ಪಾದಕರೇ ಕೊಂದಿದ್ದಾರೆ ಎನ್ನುವುದು ಅವನಿಗೆ ಗೊತ್ತಿಲ್ಲ ಅಂತ ಕಾಣ್ತದೆ. ಮೊದಲು ತನ್ನ ತಾಯಿಯನ್ನು ಕೊಲೆ ಮಾಡಿರುವವರು ಯಾರೆಂದು ಆತ ಯೋಚಿಸಬೇಕಾಗುತ್ತದೆ.
ಯಾರೇ ಆಗಲಿ ತಮ್ಮ ತಾಯಿಯ ಕೊಲೆಯಾದರೆ ಅದು ಭಯೋತ್ಪಾದನೆ, ಅದೇ ಬೇರೆಯವರ ತಾಯಿ, ಸಹೋದರಿಯರ ಮೇಲೆ ದಾಳಿ ಮಾಡಿದರೆ ಅದು ಭಯೋತ್ಪಾದನೆ ಅಲ್ಲ ಅಂತಾದರೆ ಇದೆಂಥ ವಿಚಾರ..? ಎಂದು ಭುಟ್ಟೋಗೆ ಟಾಂಗ್ ನೀಡಿದ್ದಾರೆ. ಅವರ ತಾಯಿಯನ್ನು ಕೊಲೆ ಮಾಡಿದವರು ಸ್ಥಳೀಯ ಭಯೋತ್ಪಾದಕರೇ ಎನ್ನುವುದನ್ನು ಮೊದಲು ತಿಳಿಯಲಿ. ಅವರು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಭಾರತದ ಏಕತೆಯನ್ನು ದುರ್ಬಲಗೊಳಿಸಲು ಬಯಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ನಿಮ್ಮ ಬಜೆಟ್ ನಮ್ಮ ಮಿಲಿಟರಿ ಬಜೆಟ್ಗೂ ಸಮನಾಗಿಲ್ಲ..
ನನ್ನ ಬೇಡಿಕೆಯೆಂದರೆ, ಪಾಕಿಸ್ತಾನವನ್ನು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಎಫ್ಎಟಿಎಫ್, ಬೂದು ಪಟ್ಟಿಗೆ ಸೇರಿಸುವ ಅಗತ್ಯ ಇದೆ. ಅವರು ಅಕ್ರಮ ಹಣದಿಂದ ಭಯೋತ್ಪಾದನೆ ಪೋಷಿಸುತ್ತಿದ್ದಾರೆ. ಆದ್ದರಿಂದ ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಬೇಕು. ನಿಮ್ಮಲ್ಲಿ ಸ್ವಂತ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ಈ ಏಕತೆಯನ್ನು ಹಾಳುಗೆಡವುವ ಜನರನ್ನು ಸುಮ್ಮನೇ ಬಿಡಬೇಡಿ, ಈ ರಾಷ್ಟ್ರವನ್ನು ದುರ್ಬಲಗೊಳಿಸಬೇಡಿ ಎಂದು ಓವೈಸಿ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಕುಳಿತು ಬಾಯಿಗೆ ಬಂದಂತೆ ಮಾತನಾಡುವ ಅವಿವೇಕಿಗಳಿಗೆ ಬಹುಶ: ಗೊತ್ತಿಲ್ಲ. ಪಾಕಿಸ್ತಾನವು ಸಮಯದಲ್ಲಿ ಭಾರತಕ್ಕಿಂತ ಅರ್ಧ ಗಂಟೆ ಹಿಂದಿದೆ. ಆದರೆ, ಯೋಗ್ಯತೆಯಲ್ಲಿ ಭಾರತಕ್ಕಿಂತ ಅರ್ಧ ಶತಮಾನ ಹಿಂದಿದೆ. ನಿಮ್ಮ ದೇಶದ ಬಜೆಟ್ ನಮ್ಮ ಮಿಲಿಟರಿ ಬಜೆಟ್ಗೂ ಸಮನಾಗಿಲ್ಲ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನ ತಕ್ಕ ಬೆಲೆ ತೆರಲಿದೆ..
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಆಗಿರಲಿ, ಭಯೋತ್ಪಾದಕ ಸಂಘಟನೆಯಾದ ಐಸಿಸ್ ಆಗಿರಲಿ ಅಥವಾ ಇನ್ಯಾವುದೇ ಭಯೋತ್ಪಾದಕ ಸಂಘಟನೆಯಾಗಿರಲಿ, ಈ ಎಲ್ಲಾ ಗುಂಪುಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಜಗಳವನ್ನು ತಂದಿಡುವ ಕೆಲಸ ಮಾಡುತ್ತವೆ. ಅದಕ್ಕಾಗಿಯೇ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಭಾರತಕ್ಕೆ ಬಂದು ಮುಗ್ಧ ಜನರನ್ನು ಕೊಂದರೆ ಭಾರತ ಸುಮ್ಮನಿರುವುದಿಲ್ಲ ಎಂದು ಪಾಕಿಸ್ತಾನಕ್ಕೆ ವಾರ್ನಿಂಗ್ ಮಾಡಿದ್ದಾರೆ.
ಪ್ರವಾಸಿಗರನ್ನು ಕೊಲ್ಲುವ ಮುನ್ನ ಧರ್ಮವನ್ನು ಕೇಳಿರುವ ನಿಮ್ಮ ಕೆಲಸಗಳನ್ನು ನೋಡಿದರೆ ನೀವು ಖವಾರಿಜ್ಗಿಂತ ಕೆಟ್ಟವರು, ನೀವು ಭಯೋತ್ಪಾದಕ ಸಂಘಟನೆ ಐಸಿಸ್ನಂತೆ ಇದ್ದೀರಿ ಎಂಬುದು ಸ್ಪಷ್ಟವಾಗುತ್ತದೆ ಎನ್ನುವ ಮೂಲಕ ಭಾರತಕ್ಕೆ ಪರಮಾಣು ಬಾಂಬ್ ಬೆದರಿಕೆ ಹಾಕಿರುವುದಕ್ಕೆ ಓವೈಸಿ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪಾಕಿಸ್ತಾನವು ಭಾರತವನ್ನು ಟಾರ್ಗೆಟ್ ಮಾಡಿ ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಆದರೆ, ಈ ನೀಚ ಕೃತ್ಯಕ್ಕೆ ಪಾಕಿಸ್ತಾನ ಒಂದಲ್ಲ ಒಂದು ದಿನ ತನ್ನ ತಕ್ಕೆ ಬೆಲೆ ತೆರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ.
ಕಾಶ್ಮೀರ ನಮ್ಮದು, ಕಾಶ್ಮೀರಿಗರು ನಮ್ಮವರು..
ನಾಚಿಕೆ ಇಲ್ಲದ ಕೆಲವು ಟಿವಿ ಚಾನಲ್ಗಳಲ್ಲಿನ ಕೆಲವು ನಿರೂಪಕರು ಕಾಶ್ಮೀರಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಕಾಶ್ಮೀರ, ಕಾಶ್ಮೀರಿಗಳು ಭಾರತದ ಅವಿಭಾಜ್ಯ ಅಂಗ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ತನ್ನ ಪ್ರಾಣವನ್ನೇ ಅರ್ಪಿಸಿದ್ದು ಓರ್ವ ಕಾಶ್ಮೀರಿಗ, ಗಾಯಗೊಂಡ ಮಗುವನ್ನು ಹೊತ್ತುಕೊಂಡು 40 ನಿಮಿಷಗಳ ಕಾಲ ನಡೆದು ತನ್ನ ಜೀವವನ್ನು ಉಳಿಸಿಕೊಂಡಿದ್ದು ಕಾಶ್ಮೀರಿಗ, ನಾವು ಅವರನ್ನು ಹೇಗೆ ಅನುಮಾನಿಸಲು ಸಾಧ್ಯ? ಎಂದು ಓವೈಸಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಪದೇ ಪದೇ ತಮ್ಮಲ್ಲಿ ಪರಮಾಣು ಬಾಂಬ್ಗಳಿವೆ, ಅಣು ಬಾಂಬ್ಗಳಿವೆ ಎಂದು ಹೇಳುತ್ತದೆ. ನೆನಪಿಡಿ, ನೀವು ಇನ್ನೊಂದು ದೇಶಕ್ಕೆ ಹೋಗಿ ಮುಗ್ಧ ಜನರನ್ನು ಕೊಂದರೆ, ಯಾವುದೇ ದೇಶ ಸುಮ್ಮನಿರುವುದಿಲ್ಲ. ಬದಲಿಗೆ ನಿಮ್ಮನ್ನು ಮಟ್ಟಹಾಕೇ ಹಾಕುತ್ತದೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಪಾಕಿಗಳ ವಿರುದ್ಧ ಗುಡುಗಿದ್ದಾರೆ.
ರಾಜಕೀಯದ ಹಾದಿ ಬದಲಾಯಿಸಿದ ಓವೈಸಿ..
ಇನ್ನೂ ಈ ಓವೈಸಿ ವಿಚಾರದಲ್ಲಿ ಈ ಹಿಂದೆ ಹಲವಾರು ಹೇಳಿಕೆಗಳನ್ನು ನೋಡಿದಾಗ ದೇಶದಲ್ಲಿನ ಮುಸ್ಲಿಮರನ್ನು ಎತ್ತಿಕಟ್ಟುವ ಹಾಗೂ ದೇಶ ವಿರೋಧಿ ಹೇಳಿಕೆಗಳಿಂದಲೇ ಸುದ್ದಿಯಾಗಿದ್ದವರು. ಆದರೆ ಪಹಲ್ಗಾಮ್ ದಾಳಿಯ ಬಳಿಕ ತಮ್ಮ ರಾಜಕೀಯ ಹೆಜ್ಜೆಯಲ್ಲಿ ಬದಲಾವಣೆ ಇಟ್ಟಿರುವ ಓವೈಸಿ ನೇರವಾಗಿ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೂ ಬದ್ಧವಾಗಿರುವೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಂಸದ ಓವೈಸಿ ಭಯೋತ್ಪಾದನೆ ನಿರ್ಮೂಲನೆಯ ದೊಡ್ಡ ಕಾರ್ಯಾಚರಣೆಯಲ್ಲಿ ಮೋದಿ ಸರ್ಕಾರದ ಜೊತೆ ನಿಂತಿದ್ದಾರೆ ಎಂದು ಹೇಳಬಹುದಾಗಿದೆ. ಈ ಮೂಲಕ ದೇಶದ ಹಿತಾಸಕ್ತಿಯ ವಿಚಾರ ಬಂದಾಗ ಏಕತೆ ಪ್ರದರ್ಶಿಸಿರುವ ಓವೈಸಿ ನಡೆ ಜನರಿಗೆ ಮೆಚ್ಚುಗೆಯಾಗಿದೆ.