Thursday, October 17, 2024

Latest Posts

Biography: ರತನ್ ಟಾಟಾ, ಟಾಟಾ ಗ್ರೂಪ್ ಆಫ್ ಕಂಪನಿ ಹುಟ್ಟು ಹಾಕಿದ್ದ ರೋಚಕ ಕಥೆ

- Advertisement -

Business News: ಜೀವನದಲ್ಲಿ ಏರುಪೇರುಗಳಿದ್ದರೇನೇ ಜೀವನ ಉತ್ತಮವಾಗಿರುತ್ತದೆ. ಯಾಕಂದ್ರೆ ಈಸಿಜಿಯಲ್ಲಿ ಲೈನ್ ಸ್ಟ್ರೇಟ್ ಆಗಿದ್ದರೆ ಸಾವು ಎಂದರ್ಥ. ಈ ಮಾತನ್ನ ಹೇಳಿದವರು, ಪದ್ಮ ವಿಭೂಷಣ, ಶ್ರೀಮಂತ ಉದ್ಯಮಿ ರತನ್ ಟಾಟಾ. ಟಾಟಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿರುವ ರತನ್ ಟಾಟಾ ಜೀವನದ ರೋಚಕ ಕಥೆಯನ್ನ ನಾವಿವತ್ತು ಹೇಳಲಿದ್ದೇವೆ.

ಡಿಸೆಂಬರ್ 28 , 1937ಕ್ಕೆ ಮುಂಬೈನ ಪಾರ್ಸಿ ಕುಟುಂಬದಲ್ಲಿ ರತನ್ ನವಲ್ ಟಾಟಾ ಜನನವಾಯಿತು. ಟಾಟಾ ಕಂಪನಿಯನ್ನ ಹುಹಾಕಿದ್ದ ಜಮ್‌ಶೇಟ್‌ಜೀ ಟಾಟಾರ ಮೊಮ್ಮಗನೇ ರತನ್ ಟಾಟಾ. ರತನ್‌ರ ತಂದೆ ನವಲ್ ಟಾಟಾ, ಟಾಟಾ ಆಯಿಲ್ ಮಿಲ್‌ನ ಎಂ.ಡಿಯಾಗಿದ್ದರು. ತಾಯಿ ಸೋನೂ ಟಾಟಾ ಗೃಹಿಣಿಯಾಗಿದ್ದರು. ರತನ್‌ಗೆ 10 ವರ್ಷವಿದ್ದಾಗ, ನವಲ್ ಮತ್ತು ಸೋನು ವಿಚ್ಛೇದನ ಪಡೆದರು. ನವಲ್ ಟಾಟಾ ಸಿಮೋನ್ ಟಾಟಾರನ್ನ ವಿವಾಹವಾದರು. ಹೀಗಾಗಿ ರತನ್ ಅಜ್ಜಿಯ ಪಾಲನೆ ಪೋಷಣೆಯಲ್ಲಿ ಬೆಳೆದರು.

ಮುಂಬೈ ಮತ್ತು ಶಿಮ್ಲಾದ ಕಾಲೇಜಿನಲ್ಲಿ ಶಾಲಾ- ಕಾಲೇಜು ಶಿಕ್ಷಣ ಮುಗಿಸಿದ ರತನ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾ ತೆರಳಿದರು. ಅಲ್ಲಿ ಶಿಕ್ಷಣ ಪಡೆಯುತ್ತ, ಹೊಟೇಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಕೂಡ ಮಾಡುತ್ತಿದ್ದರು. 1959ರಲ್ಲಿ ರತನ್‌ಗೆ ಅಮೆರಿಕಾ ಕಾಲೇಜಿನಿಂದ ಬ್ಯಾಚುಲರ್ ಇನ್ ಆರ್ಕಿಟೆಕ್ಟರ್ ಡಿಗ್ರಿ ಸಿಕ್ಕಿತು. ಇದಾದ ಬಳಿಕ ಭಾರತಕ್ಕೆ ಬಂದು ಕೆಲ ವರ್ಷಗಳ ಕಾಲ ಟಾಟಾ ಗ್ರೂಪ್‌ನ ಹಲವು ಕಂಪನಿಗಳಲ್ಲಿ ರತನ್ ಕೆಲಸ ಮಾಡಿದರು.

1971ರಲ್ಲಿ ಟಾಟಾ ಗ್ರೂಪ್‌ನ ನೆಲ್ಕೋ ಕಂಪನಿಯ ಜವಾಬ್ದಾರಿ ನೀಡಲಾಯಿತು. ಈ ಕಂಪನಿಯಲ್ಲಿ ಟಿವಿ ಮತ್ತು ರೇಡಿಯೋವನ್ನ ತಯಾರಿಸಲಾಗುತ್ತಿತ್ತು. ಬರೀ 3 ವರ್ಷದಲ್ಲಿ ಈ ಕಂಪನಿಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ರತನ್ ಯಶಸ್ವಿಯಾದರು. ಆದರೆ, ಕೆಲ ತಿಂಗಳ ಬಳಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ನೆಲ್ಕೋ ಕಂಪನಿಯನ್ನ ಮುಚ್ಚಲಾಯಿತು.

1975ರಲ್ಲಿ ಹಾರ್ವರ್ಡ್ ಯುನಿವರ್ಸಿಟಿಯಿಂದ ರತನ್ ಮ್ಯಾನೇಜ್‌ಮೆಂಟ್ ಡಿಗ್ರಿ ಪಡೆದರು. ಈ ಹಿಂದೆ ನೆಲ್ಕೋ ಕಂಪನಿಯನ್ನ ನಡೆಸಲು ಸಫಲನಾಗಿದ್ದ ರತನ್‌ಗೆ, ಈ ಬಾರಿ ಟಾಟಾ ಎಕ್ಸ್‌ಪ್ರೆಸ್ ಮಿಲ್ ಸಂಭಾಳಿಸುವ ಜವಾಬ್ದಾರಿ ಸಿಕ್ಕಿತ್ತು. ಯಾಕಂದ್ರೆ ಅದು ಮುಚ್ಚುವ ಹಂತ ಬಂದು ತಲುಪಿತ್ತು. ಆ ನಷ್ಟವನ್ನ ಸರಿದೂಗಿಸಿ, ಲಾಭ ತಂದುಕೊಡುತ್ತಾರೆಂದು ರತನ್‌ ಮೇಲೆ ಕಂಪನಿಗೆ ನಂಬಿಕೆಯಿತ್ತು. ಇದಕ್ಕಾಗಿ ರತನ್ 50 ಲಕ್ಷ ರೂಪಾಯಿ ಬಂಡವಾಳ ಹೂಡಿದ್ರೆ, ಕಂಪನಿಯ ನಷ್ಟ ಸರಿದೂಗಿಸಬಹುದು ಎಂದರು. ಆದ್ರೆ ಬಂಡವಾಳ ಹಾಕಲು ಕಂಪನಿ ನಿರಾಕರಿಸಿದ್ದರಿಂದ ಆ ಕಂಪನಿ ಸಹ ಬಂದ್ ಆಯಿತು.

ಎರಡನೇ ಬಾರಿಯೂ ರತನ್ ಸೋತಿದ್ದರು. ಕಂಪನಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಆದೂ ಕೂಡ ಛಲ ಬಿಡದ ರತನ್, ತಮ್ಮ ತಪ್ಪಿನಿಂದ ಪಾಠ ಕಲಿತರು. 1981ರಲ್ಲಿ ರತನ್‌ರನ್ನ ಟಾಟಾ ಇಂಡಸ್ಟ್ರಿಯ ಅಧ್ಯಕ್ಷನನ್ನಾಗಿ ನೇಮಿಸಲಾಯಿತು. 1991ರಲ್ಲಿ ಟಾಟಾ ಗ್ರೂಪ್‌ನ ಚೇರಮನ್ ಮಾಡಲಾಯಿತು.

ಇದಾದ ಬಳಿಕ ಉದ್ಯಮದಲ್ಲಿ ಪಳಗಿದ್ದ ರತನ್ ಟಾಟಾ ಕಂಪನಿಯನ್ನ ಉತ್ತಮವಾಗಿ ನಿಭಾಯಿಸಿಕೊಂಡು ಬಂದರು. ಬರೀ ಟ್ರಕ್, ಟೆಂಪೋ ಹೊಂದಿದ್ದ ಟಾಟಾ ಕಂಪನಿಯಲ್ಲಿ ಕಾರ್ ಸಹ ಬಂತು. ಟಾಟಾ ಕಂಪನಿಯ ಇಂಡಿಕಾ ಕಾರ್, ಲಕ್ಸೂರಿಯಸ್ ಕಾರ್ ಆಗಿತ್ತು. ರತನ್‌ರ ಡ್ರೀಮ್ ಪ್ರಾಜೆಕ್ಟ್ ಆಗಿದ್ದ ಇಂಡಿಕಾ ಕಾರ್‌ ಉದ್ಯಮ ಉತ್ತಮವಾಗಿಯೇ ಸಾಗಿತ್ತು. ಆದ್ರೆ ಕಂಪನಿಯಲ್ಲಿರುವ ಕೆಲವರು ಅವವ್ಯಹಾರ ಮಾಡಿದ ಪರಿಣಾಮವಾಗಿ ಇಂಡಿಕಾ ಕಾರ್ ಉದ್ಯಮ ನೆಲಕಚ್ಚಿತು. ಮಾರ್ಕೇಟ್‌ನಲ್ಲಿ ಇಂಡಿಕಾ ಬೇಡಿಕೆ ಕಡಿಮೆಯಾಯಿತು.

ಈ ಮೂಲಕ ನಷ್ಟ ಅನುಭವಿಸಿದ ಟಾಟಾ ಮೋಟರ್ಸ್, ಈ ಕಾರ್ ಉದ್ಯಮವನ್ನ ಬೇರೆಯವರಿಗೆ ವಹಿಸಿಬಿಡುವ ಸಲಹೆ ನೀಡಿತು. ಇದಕ್ಕೆ ಒಪ್ಪಿದ ರತನ್, ಕಾರ್ ಮಾಲೀಕತ್ವವನ್ನ ಫೋರ್ಡ್ ಕಂಪನಿಗೆ ಮಾರುವ ನಿರ್ಧಾರ ಮಾಡಿದರು.ಈ ವೇಳೆ ಮಾತನಾಡಿದ ಫೋರ್ಡ್ ಕಂಪೆನಿ ಮಾಲೀಕ,’ ನಿಮ್ಮ ಕೈಯಲ್ಲಿ ಇಷ್ಟು ದೊಡ್ಡ ಉದ್ಯಮ ಮಾಡಲು ಅಸಾಧ್ಯವಾಗಿದ್ದಲ್ಲಿ, ನಿಮಗೆ ಈ ಉದ್ಯಮ ನಡೆಸುವ ಅರ್ಹತೆ ಇಲ್ಲದಿದ್ದಲ್ಲಿ ಯಾಕೆ ಈ ಉದ್ಯಮ  ಶುರು ಮಾಡಿದ್ರಿ. ನಾವು ನಿಮ್ಮ ಕಾರ್ ಮಾಲೀಕತ್ವ ತೆಗೆದುಕೊಂಡು ಉಪಕಾರ ಮಾಡುತ್ತಿದ್ದೇವೆ’ ಎಂದು ಸೊಕ್ಕಿನ ಮಾತನ್ನಾಡಿದರು.

ಇದಕ್ಕೆ ಬೇಸರಗೊಂಡ ರತನ್, ಈ ಮಾತಿಗೆ ಸಫಲತೆಯ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿದರು. ಇಂಡಿಕಾ ಕಾರ್ ಮಾಲೀಕತ್ವ ತಾವೇ ನಿಭಾಯಿಸಲು ನಿರ್ಧರಿಸಿದರು.  ಹಲವು ವರ್ಷಗಳ ಪ್ರಯತ್ನದಿಂದ ರತನ್ ಟಾಟಾ ಮೋಟರ್ಸ್‌ ಕಂಪನಿಯನ್ನ ಮತ್ತೆ ಉನ್ನತಮಟ್ಟಕ್ಕೆ ಕೊಂಡೊಯ್ದರು. ಈ ಮೂಲಕ ಫೋರ್ಡ್‌ ಕೊಂಕು ಮಾತಿಗೆ ಜವಾಬ್ ನೀಡಿದರು.

ಈ ಜವಾಬ್ ಹೇಗಿತ್ತೆಂದರೆ, ಫೋರ್ಡ್ ಕಂಪನಿ ನಷ್ಟ ಅನುಭವಿಸಿ, ದೀವಾಳಿಯಾಗತೊಡಗಿತ್ತು. ಫೋರ್ಡ್ ಕಂಪೆನಿಯ ಭಾಗವಾಗಿದ್ದ ಜಾಗ್ವಾರ್ ಮತ್ತು ಲ್ಯಾಂಡರೋವರ್‌ ಕಾರನ್ನ ಮಾರುವ ಸ್ಥಿತಿ ತಲುಪಿತ್ತು. ಇದನ್ನ ಕೊಂಡುಕೊಳ್ಳಲು ರತನ್ ಮುಂದಾಗಿದ್ದರು. ಫೋರ್ಡ್ ಕಂಪನಿ ಮಾಲೀಕ ಮತ್ತು ರತನ್ ಮತ್ತೆ ಭೇಟಿಯಾದರು. ಅಂದು ಫೋರ್ಡ್ ಮಾಲೀಕ ಮಾತನಾಡಿದ್ದಂತೆ ರತನ್ ಕೂಡ ಕೊಂಕು ನುಡಿಯಬಹುದಾಗಿತ್ತು. ಆದ್ರೆ ರತನ್ ಹಾಗೇ ಮಾಡಲಿಲ್ಲ. ಬದಲಾಗಿ ಫೋರ್ಡ್ ಮಾಲೀಕನೇ, ನೀವು ನಮ್ಮ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರ್‌ಗಳನ್ನ ಕೊಂಡು ನಮಗೆ ಉಪಕಾರ ಮಾಡುತ್ತಿದ್ದೀರಿ ಎಂದು ಹೇಳಿದರು. ಸಫಲತೆ ಅಂದ್ರೆ ಇದೇ ಅಲ್ವಾ..?

ಈ ಸಫಲತೆ ಹೀಗೆ ಮುಂದುವರೆಯಿತು. ನಡು ನಡುವೆ ನಷ್ಟ ಕೂಡ ಅನುಭವಿಸುವಂತಾಯಿತು. ನಂತರ ಆನ್‌ಲೈನ್ ಆ್ಯಪ್‌ಗಳನ್ನ ತೆರೆದು, ರತನ್ ಉದ್ಯಮ ಆರಂಭಿಸಿದರು. ನಾವೆಲ್ಲ ಉಪಯೋಗಿಸುವ ಪೇಟಿಎಂ, ಓಲಾ, ಲೆನ್ಸ್‌ಕಾರ್ಟ್, ಜಿವಾಮೆ, ಸ್ನ್ಯಾಪ್ ಡೀಲ್ ಇತ್ಯಾದಿ ಆನ್‌ಲೈನ್ ಆ್ಯಪ್‌ಗಳು ಟಾಟಾ ಕಂಪನಿಗೆ ಸೇರಿದ್ದು.

ತಂದೆ ತಾಯಿಯ ಸಂಬಂಧ ಕಂಡೋ ಅಥವಾ ಉದ್ಯಮದಲ್ಲಿ ಉನ್ನತ ಸಾಧನೆ ಮಾಡಬೇಕು ಅನ್ನೋ ಕಾರಣಕ್ಕೋ ಗೊತ್ತಿಲ್ಲ. ರತನ್ ಅವಿವಾಹಿತರಾಗಿಯೇ ಉಳಿದಿದ್ದಾರೆ. ಕೆಲ ಸುದ್ದಿಯ ಪ್ರಕಾರ ರತನ್ ವಿದೇಶಿ ಯುವತಿಯನ್ನು ಪ್ರೀತಿಸಿದ್ದರಂತೆ. ಆದ್ರೆ ಆಕೆಯ ಅಪ್ಪ ಅಮ್ಮ ಆಕೆ ರತನ್‌ರೊಂದಿಗೆ ಭಾರತಕ್ಕೆ ಬರುವುದನ್ನ ಒಪ್ಪಲಿಲ್ಲವಂತೆ. ಈ ಕಾರಣಕ್ಕೆ ರತನ್ ಬೇರೆ ಯಾರನ್ನೂ ವಿವಾಹವಾಗಲು ಇಷ್ಟಪಟ್ಟಿಲ್ಲ ಅಂತಾ ಹೇಳಲಾಗುತ್ತದೆ. ಅವರು ಪ್ರಾಣಿಪ್ರಿಯ ಮತ್ತು ಪುಸ್ತಕಪ್ರಿಯರಾಗಿದ್ದು, ಉದ್ಯಮ ನಿಭಾಯಿಸುವಲ್ಲಿಯೂ ನಿರತರಾಗಿದ್ದಾರೆ. ದೇಶ ವಿದೇಶಗಳಲ್ಲಿ ನೂರಕ್ಕೂ ಹೆಚ್ಚು ಕಂಪನಿ ನಡೆಸುತ್ತಿರುವ ಟಾಟಾ ಗ್ರೂಪ್‌ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ. ಇಷ್ಟೇ ಅಲ್ಲದೇ, ರತನ್ ಟಾಟಾ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇಷ್ಟು ಸರಳ ಜೀವನ ಬದುಕಿದ್ದ ವ್ಯಕ್ತಿ ಇದೀಗ ಕೊನೆಯುಸಿರೆಳೆದಿದ್ದಾರೆ. ಶ್ರೀಮಂತಿಕೆ ಇದ್ದರೂ, ದಾನ ಧರ್ಮ ಮಾಡಿ, ಸರಳತೆ ಮೆರೆದಿದ್ದ ಸರಳತೆಯ ಸಾಕಾರ ಮೂರ್ತಿ ಅಸ್ತಂಗತರಾಗಿದ್ದಾರೆ. ಹೋಗುವ ಮುನ್ನ ಎಲ್ಲರಿಗೂ ಮಾದರಿಯಾಗಿದ್ದಾರೆ.

- Advertisement -

Latest Posts

Don't Miss