ಮದ್ದೂರು ಕೇಸರಿಮಯ ಶಾಂತಿ ಸಭೆಗೆ ಬಿಜೆಪಿ ಗೈರು!

ಮದ್ದೂರಿನ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಕಲ್ಲು ತೂರಾಟ ಘಟನೆ ರಾಜ್ಯದಲ್ಲಿ ಕೊಲಾಹಲ ಸೃಷ್ಟಿಸಿತು. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು, ಮುಖಂಡರು ಪ್ರತಿಭಟನೆ ಮಾಡಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎನ್.‌ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮದ್ದೂರಿನಲ್ಲಿ ಕರೆದಿದ್ದ ಶಾಂತಿ ಸಭೆಗೆ ಬಿಜೆಪಿ, ಹಿಂದುತ್ವ ಪರ ಮುಖಂಡರು ಗೈರಾದರು.

ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯು ಮುಸ್ಲಿಂ ಮುಖಂಡರು, ಕಾಂಗ್ರೆಸ್‌ ಕಾರ್ಯಕರ್ತರು, ಅಧಿಕಾರಿಗಳಿಗೆ ಸೀಮಿತವಾಗಿತ್ತು. ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಯಾರೊಬ್ಬರೂ ಬರಲಿಲ್ಲ. ಸಚಿವರು ಮಾತನಾಡಿ, ಸಭೆಗೆ ಬಿಜೆಪಿ ಮುಖಂಡರು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಅವರು ಬಾರದೆ ತಮಗೆ ಶಾಮತಿ ಬೇಕಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಸತ್ಯಶೋಧನಾ ಸಮಿತಿ ಮಾಡಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಜಿಲ್ಲಾಧಿಕಾರಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು. ಬಿಜೆಪಿ ಘಟಕದ ಇಂದ್ರೇಶ್‌ ಈ ಬಗ್ಗೆ ಮಾತನಾಡಿ, ಮದ್ದೂರು ಘಟನೆಯಲ್ಲಿ ಒಂದೆರಡು ಕಲ್ಲೆಸೆಯಲಾಗಿದೆ ಎಂದು ಉಸ್ತುವಾರಿ ಸಚಿವರು ಹೇಳುತ್ತಾರೆ. ಗೃಹ ಸಚಿವ ಪರಮೇಶ್ವರ್ ಅವರು ಸಣ್ಣ ಘಟನೆ ಅಂತಾರೆ. ಇಂಥವರ ನೇತೃತ್ವದಲ್ಲಿ ಸಭೆ ನಡೆಸಿದರೆ ಏನು ಪ್ರಯೋಜನ? ಹೀಗಾಗಿ ನಾವು ಸಭೆಗೆ ಹೋಗಿಲ್ಲ ಎಂದರು.

ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆಂದು ಗೊತ್ತಿತ್ತು. ನ್ಯಾಯ ಕೇಳಲು ಹೋದವರಿಗೇ ಅನ್ಯಾಯ ಮಾಡಿದ್ದಾರೆ. 500 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಲೀಗಲ್ ಟೀಂ ಅವರ ಜೊತೆ ಇರುತ್ತದೆ ಎಂದು ಪ್ರತಿಕ್ರಿಯಿಸಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author