ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ಗೊಂದಲ ಮುಂದುವರಿದಿದ್ದರೂ, ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ವಿಧಾನಸಭೆಯಲ್ಲಿ ಸರ್ಕಾರವನ್ನು ಪರಿಣಾಮಕಾರಿಯಾಗಿ ಕಟ್ಟಿ ಹಾಕಲು ವಿಫಲವಾಗಿದೆ ಎಂಬ ಅಸಮಾಧಾನ ಬಿಜೆಪಿಯ ಶಾಸಕರಲ್ಲೇ ವ್ಯಕ್ತವಾಗಿದೆ.
ಸಾಕಷ್ಟು ಜ್ವಲಂತ ಸಮಸ್ಯೆಗಳು ಮತ್ತು ವಿವಾದಗಳು ಇದ್ದರೂ, ಮುಂದಿನ ಸಾಲಿನ ನಾಯಕರು ರಕ್ಷಣಾತ್ಮಕ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಬೇಸರ ಪಕ್ಷದೊಳಗೆ ಮನೆ ಮಾಡಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ಆರಂಭವಾದರೂ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯವೂ ಶಾಸಕರಿಂದ ಕೇಳಿಬರುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇತರ ಸಚಿವರ ವಾಗ್ದಾಳಿಗೆ ಮುಂದಿನ ಸಾಲಿನ ನಾಯಕರು ದಿಟ್ಟವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಟೀಕೆಯೂ ಕೇಳಿಬರುತ್ತಿದೆ.
ಕಬ್ಬು ಹಾಗೂ ಮೆಕ್ಕೆ ಜೋಳ ಬೆಳೆಗಾರರ ಸಮಸ್ಯೆಗಳು, ಮಳೆ ಹಾಗೂ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡದಿರುವುದು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳಿಗೆ ತಕ್ಕಮಟ್ಟದ ಅನುದಾನ ಹಂಚಿಕೆ ಆಗದಿರುವ ವಿಚಾರಗಳನ್ನು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಇವುಗಳನ್ನು ಸರ್ಕಾರದ ವಿರುದ್ಧ ಪ್ರಧಾನ ಅಸ್ತ್ರವಾಗಿ ಬಳಸಲು ಇನ್ನೂ ಸಾಧ್ಯವಾಗಿಲ್ಲ. ಅಧಿವೇಶನದ ಎರಡನೇ ವಾರದಲ್ಲಾದರೂ ಈ ಚರ್ಚೆಗಳು ಪರಿಣಾಮಕಾರಿಯಾಗುತ್ತವೆಯೇ ಎಂಬ ಅನುಮಾನ ಶಾಸಕರಲ್ಲಿ ಮೂಡಿದೆ.
ಇದೇ ವೇಳೆ, ಕಾಂಗ್ರೆಸ್ನ ನಾಯಕತ್ವ ಬದಲಾವಣೆ ವಿಷಯವನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಭಾಷಣದ ಮಧ್ಯೆ ಪ್ರಸ್ತಾಪಿಸಿದ್ದು, ಸೋಮವಾರದ ಬಳಿಕ ಈ ವಿಷಯದ ಮೇಲೆ ವಿಸ್ತೃತ ಚರ್ಚೆ ನಡೆಸಲು ಅವಕಾಶ ಬಳಸಿಕೊಳ್ಳಬೇಕೆಂಬ ಒತ್ತಾಯ ಪಕ್ಷದೊಳಗೆ ಕೇಳಿಬರುತ್ತಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದ ಸದಸ್ಯರು ಬಹಿರಂಗ ಹೇಳಿಕೆಗಳ ಮೂಲಕ ಪರಸ್ಪರ ವಾಗ್ದಾಳಿ ನಡೆಸಿದ್ದಲ್ಲದೆ, ಔತಣ ಕೂಟಗಳ ಸಭೆಯೂ ನಡೆದಿತ್ತು. ಈ ಬೆಳವಣಿಗೆಗಳನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇನ್ನೊಂದೆಡೆ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಮತ್ತು ಮೇಕೆದಾಟು ಸೇರಿದಂತೆ ನೀರಾವರಿ ಯೋಜನೆಗಳ ವಿಷಯಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಂದಿಟ್ಟುಕೊಳ್ಳಲು ಸಿದ್ಧತೆ ನಡೆಸಿವೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಸಹಕಾರ ಸಿಗುತ್ತಿಲ್ಲ ಎಂಬುದನ್ನು ಸರ್ಕಾರ ತನ್ನ ರಕ್ಷಣಾತ್ಮಕ ಅಸ್ತ್ರವಾಗಿ ಬಳಸಲು ಸಜ್ಜಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅದರಲ್ಲೂ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಪ್ರಕರಣಗಳು ಹೆಚ್ಚುತ್ತಿರುವ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಆಳಂದ ಮತಕಳ್ಳತನ ಪ್ರಕರಣದ ಎಸ್ಐಟಿ ವರದಿಯನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಯಾರಿ ನಡೆಸಿದೆ. ಇದರ ಜೊತೆಗೆ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧಿಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




