ಬೆಂಗಳೂರು: ತೇಜೇಂದರ್ ಬಗ್ಗಾ ತಂದೆ-ತಾಯಿ ಹಲ್ಲೆ ಮಾಡಿದಂತ ಪಂಜಾಬ್ ಪೊಲೀಸರ ಕೃತ್ಯ ಖಂಡನೀಯವಾಗಿದೆ. ದೆಹಲಿಗೆ ಪಂಜಾಬ್ ಪೊಲೀಸರನ್ನು ಕಳಿಸಿ ಅರೆಸ್ಟ್ ಮಾಡಿಸೋ ದುಸ್ಸಾಹಕ್ಕೆ ಕೈಹಾಕಿದ್ದು ಖಂಡನೀಯವೆಂದು ಆರೋಪಿಸಿ, ಬಿಜೆಪಿ ಯುವ ಮೋರ್ಚಾದಿಂದ ಇಂದು, ಎಎಪಿ ಕಚೇರಿಗೆ ರಾಜ್ಯಾಧ್ಯಕ್ಷ ಡಾ ಸಂದೀಪ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿನ ಎಎಪಿ ಕಚೇರಿಯ ಮುಂದೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ಅಲ್ಲದೇ, ಕೇಜ್ರಿವಾಲ್ ಆಡಳಿತ ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆ, ತುಘಲಕ್ ದರ್ಬಾರ್ ನೆನಪಿಸುವಂತಿದೆ. ದೆಹಲಿಗೆ ಪಂಜಾಬ್ ಪೊಲೀಸ್ ಕಳ್ಸಿ ಅರೆಸ್ಟ್ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ ಎಎಪಿ ಮುಖಭಂಗ ಅನುಭವಿಸಿದೆ. ತೇಜೇಂದರ್ ಭಗ್ಗಾ ತಾಯಿ, ಹಾಗೂ ತಂದೆಗೆ ಹಲ್ಲೆ ಮಾಡಿರುವ ಪಂಜಾಬ್ ಪೊಲೀಸರ ಕೃತ್ಯ ಖಂಡನೀಯ ಎಂಬುದಾಗಿ ಕಿಡಿಕಾರಿದರು.
ಈ ವೇಳೆ ಮಾತನಾಡಿದಂತ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್, ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ.. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇಡೀ ದೇಶ ಗೆದ್ದಂತೆ ಕೇಜ್ರಿವಾಲ್ ವರ್ತಿಸುತ್ತಿದ್ದಾರೆ. ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಕಾನೂನಿನ ಅರಿವಿಲ್ಲದ ಕೇಜ್ರಿವಾಲ್ ಗೆ ಪಾಠ ಮಾಡಬೇಕಿದೆ. ನಮ್ಮ ಪಕ್ಷದ ತೇಜೇಂದರ್ ಭಗ್ಗಾ ಮೇಲಿನ ಈ ದ್ವೇಷಪೂರಿತ ವರ್ತನೆ ಕೇಜ್ರಿವಾಲ್ ಎಂಥಹ ಕುತಂತ್ರಿ ಅನ್ನೋದನ್ನ ತೋರಿಸುತ್ತೆ ಎಂದರು.
ಖಲಿಸ್ತಾನಿಗಳ ಸಪೋರ್ಟರ್ ಈ ಕೇಜ್ರಿವಾಲ್ ಈಗಾಗಲೇ ಬಾಲ ಬಿಚ್ಚೋಕೆ ಶುರುಮಾಡಿದ್ದಾನೆ.. ಮುಂದಿನ ದಿನಗಳಲ್ಲಿ ಜನ ಕೇಜ್ರಿವಾಲ್ ಗೆ ಪಾಠ ಕಲಿಸ್ತಾರೆ. ಈಗ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರನ್ನೇ ಬಂಧಿಸಿದ್ದಾರೆ.. ಅವಿವೇಕಿ ಸಿಎಂ ಮಾತು ಕೇಳಿ ಪಂಜಾಬ್ ಪೊಲೀಸರು ಫೂಲ್ ಆಗಿದ್ದಾರೆ. ಎರಡೇ ರಾಜ್ಯ ಅಧಿಕಾರದಲ್ಲಿ ಇರುವ ಈ ಪೊರಕೆ ಪಕ್ಷ ಇಷ್ಟೊಂದು ಹಾರಾಡ್ಬೇಕಾದ್ರೆ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷದ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಎಪಿ ಕುತಂತ್ರಿಗಳಿಗೆ ಎಚ್ಚರಿಕೆ ಕೊಡ್ತೇನೆ.. ಈ ರೀತಿಯಾಗಿ ಹುಚ್ಚಾಟ ಮುಂದುವರೆದರೆ ಬಿಜೆಪಿ ಪಕ್ಷದ 10 ಪಟ್ಟು ಶಾಕ್ ಎಎಪಿಗೆ ಎಲ್ಲಾ ರೀತಿಯಲ್ಲೂ ಕೊಡುತ್ತೆ ಅಂತ ಎಚ್ಚರಿಕೆ ನೀಡ್ತೇನೆ ಎಂಬುದಾಗಿ ವಾಗ್ದಾಳಿ ನಡೆಸಿದರು.




