ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣ ಅಗೆದಷ್ಟು ಮತ್ತೆ, ಮತ್ತೆ ಮೇಲೇಳುತ್ತಿದೆ. ಈಗಾಗಲೇ ಮಾಸ್ಕ್ಮ್ಯಾನ್ ಚಿನ್ನಯ್ಯ ಸುಳ್ಳು ಹೇಳ್ತಿದ್ದಾನೆ ಅನ್ನೋದು ಎಸ್ಐಟಿ ಅಧಿಕಾರಿಗಳಿಗೆ ಅರ್ಥವಾಗಿದೆ. ಚಿನ್ನಯ್ಯನ ಹಿಂದೆ ಷಡ್ಯಂತ್ರ ಇದ್ದು, ಯಾವ ಕಾರಣಕ್ಕೆ ಸುಳ್ಳು ಹೇಳಿದ ಅನ್ನೋದನ್ನ ಪತ್ತೆ ಮಾಡಬೇಕಿದೆ. ಈ ಮಾಹಿತಿಯನ್ನ ರಾಜ್ಯ ಸರ್ಕಾರದ ಅಭಿಯೋಜಕರು, ಹೈಕೋರ್ಟ್ಗೆ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ತಾವು ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸಲು, ಎಸ್ಐಟಿಗೆ ಸೂಚನೆ ನೀಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡ ಮನವಿ ಮಾಡಿದ್ರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠಕ್ಕೆ, ಸರ್ಕಾರದ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್, ವಾದ ಮಂಡಿಸಿದ್ರು.
ಆರೋಪಿ ಚಿನ್ನಯ್ಯ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ, ಮಹಿಳೆಯರು ಮತ್ತು ಶಾಲಾ ಮಕ್ಕಳ ದೇಹಗಳನ್ನು ಹೂತಿದ್ದಾಗಿ ಹೇಳಿದ್ದ. ನಂತರ ಚಿನ್ನಯ್ಯನೇ ಗುರುತಿಸಿದ್ದ 13 ಸ್ಥಳಗಳಲ್ಲಿ ಎಸ್ಐಟಿ ಶೋಧ ನಡೆಸಿತ್ತು. ಒಂದು ಸ್ಥಳದಲ್ಲಿ ವ್ಯಕ್ತಿಯೊಬ್ಬರ ಅಸ್ಥಿ ಪತ್ತೆಯಾಗಿತ್ತು. ಮತ್ತೊಂದು ಸ್ಥಳದಲ್ಲಿ 2ನೇ ಅಸ್ಥಿ ಪತ್ತೆಯಾಗಿತ್ತು. ಅದೂ ಮಹಿಳೆಯ ಶವವಾಗಿರಲಿಲ್ಲ. ದೂರು ನೀಡಿದ್ದಾಗ ಪೊಲೀಸರಿಗೆ ತಾನು ಒಪ್ಪಿಸಿದ್ದ ತಲೆಬರುಡೆ ಮಹಿಳೆಯದ್ದು ಎಂದು ಚಿನ್ನಯ್ಯನೇ ಹೇಳಿದ್ದ. ಆದರೆ, ಆ ತಲೆಬುರುಡೆ ಮಹಿಳೆಯದ್ದಲ್ಲ. 30 ವರ್ಷದ ಪುರುಷನದ್ದು ಎಂದು ಎಫ್ಎಸ್ಎಲ್ ವರದಿ ಹೇಳಿದೆ ಅಂತಾ ಸರ್ಕಾರಿ ಅಭಿಯೋಜಕ ವಾದ ಮಂಡಿಸಿದ್ರು.
ಅರ್ಜಿದಾರರು ಮತ್ತು ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೂಲ ದೂರುದಾರ ಸಿ.ಎನ್.ಚಿನ್ನಯ್ಯ ಆರೋಪಿಯಾಗಿದ್ದಾರೆ. ಆತನ ಬಳಿಯಿದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿ ಅಥವಾ ದಾಖಲೆಯಿದ್ದಲ್ಲಿ, ನ್ಯಾಯಾಲಯಕ್ಕೆ ಸಲ್ಲಿಸಲು ಸೂಚನೆ ನೀಡಿದೆ. ಬಳಿಕ ಸೆಪ್ಟೆಂಬರ್ 26ಕ್ಕೆ ಹೈಕೋರ್ಟ್ ವಿಚಾರಣೆಯನ್ನ ಮೂಂದೂಡಿದೆ.
ಮಾಸ್ಕ್ಮ್ಯಾನ್ ಚಿನ್ನಯ್ಯ ಕಳೆದ ಜುಲೈ 11ರಂದು ಸಾಕ್ಷಿದಾರನಿಗೆ ಬಂದು ತಪ್ಪೊಪ್ಪಿಕೊಂಡಿದ್ದ. ಚಿನ್ನಯ್ಯನನ್ನು ವಶಕ್ಕೆ ಪಡೆದ ಎಸ್ಐಟಿ ಸುದೀರ್ಘ ವಿಚಾರಣೆ ನಡೆಸಿದೆ. ಸೆಪ್ಟೆಂಬರ್ 18ರಂದು ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ. ಆ ವೇಳೆ ಮಾಸ್ಕ್ ಹಾಕಿರಲಿಲ್ಲ. ಸಾಕ್ಷಿ ರಕ್ಷಣಾ ಕಾಯ್ದೆಯ ಅವಧಿ ಮುಗಿದಿದ್ದರಿಂದ, ಮಾಸ್ಕ್ ಹಾಕದೆಯೇ ಚಿನ್ನಯ್ಯನನ್ನ ಕರೆದುಕೊಂಡು ಬರಲಾಗಿತ್ತು. ಚಿನ್ನಯ್ಯ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಮತ್ತೆ ಸೆಪ್ಟಂಬರ್ 23ರಂದು ಕೋರ್ಟ್ಗೆ ಹಾಜರಾಗಬೇಕಿದೆ.