ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಅಂದರೆ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಸುಮಾರು 1.75 ಲಕ್ಷ ಶಿಕ್ಷಕರು ಸಮೀಕ್ಷಕರಾಗಿ 2 ಕೋಟಿಗೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ 7 ಕೋಟಿ ಜನರ ದತ್ತಾಂಶ ಸಂಗ್ರಹಿಸಲಿದ್ದಾರೆ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ತಿಳಿಯಲು ಪೂರಕವಾದ 60 ಪ್ರಶ್ನೆಗಳಿಗೆ ಸಮೀಕ್ಷರು ಮಾಹಿತಿ ಸಂಗ್ರಹಿಸಲಿದ್ದಾರೆ.
ಕರ್ನಾಟಕದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷೆ ಹೆಸರಲ್ಲಿ ಇಂದಿನಿಂದ ಜಾತಿಗಣತಿ ಶುರುವಾಗುತ್ತಿದೆ. ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಇಂದಿನಿಂದ ಪ್ರತೀ ಮನೆಗಳಿಗೆ ಬರಲಿರುವ ಈ ಗಣತಿದಾರರು, ಮೊದಲು ನಿಮ್ಮ ಧರ್ಮ, ಜಾತಿ, ಉಪಜಾತಿಯ ಮಾಹಿತಿ ಪಡೆಯಲಿದ್ದಾರೆ. ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಮಾಹಿತಿ ಪಡೆಯಲಿದ್ದಾರೆ. ಅವರವರ ಸ್ಥಿತಿಗತಿಗೆ ಅನುಗುಣವಾಗಿ ಸರ್ಕಾರದ ಯೋಜನೆಗಳನ್ನ ತಲುಪಿಸಲು ಈ ಗಣತಿ ಅನುಕೂಲ ಆಗಲಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಇಂದಿನಿಂದ ಜಾತಿ ಗಣತಿ ಶುರುವಾಗುವುದಿಲ್ಲ.
ಶಿಕ್ಷಕರು ಹಾಗೂ ಇತರರಿಗೆ ತರಬೇತಿ ಪ್ರಗತಿಯಲ್ಲಿರುವುದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಎರಡು ದಿನ ತಡವಾಗಿ ಸಮೀಕ್ಷೆ ಶುರುವಾಗಲಿದೆ. ಹಾಗಾಗಿ ಸಮೀಕ್ಷೆ ಮುಕ್ತಾಯದ ಅವಧಿ ಸಹ ಅ.7ರ ಬದಲಿಗೆ ಒಂದೆರಡು ದಿನ ವಿಸ್ತರಣೆಯಾಗಲಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ