ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಪವರ್ ಶೇರಿಂಗ್ ವಿಚಾರವಾಗಿ ಕೋಲ್ಡ್ ವಾರ್ ನಡೀತಿದೆ. ಈ ಮಧ್ಯೆ ಡಿಕೆಶಿ ತಮ್ಮ ಮಾಜಿ ಸಂಸದ ಡಿ.ಕೆ ಸುರೇಶ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.
98-95 ವಯಸ್ಸು ಆಗಿರುವವರೂ ರಾಜಕೀಯದಲ್ಲಿ ಇದ್ದಾರೆ. ಹೀಗಾಗಿ 2028ರಲ್ಲಿ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ತಪ್ಪೇನಿಲ್ಲ. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ಮಾಡುತ್ತೇವೆ.
ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗೆ ಇದೆ. ಇನ್ನೂ ಅವರು ಗಟ್ಟಿಯಾಗಿ, ಆರಾಮವಾಗಿ ಇದ್ದಾರೆ. ಉತ್ತಮವಾದ ಆಡಳಿತ ನಡೆಯುತ್ತಿದೆ. ಮುಂದೆ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸೋದ್ರಲ್ಲಿ ತಪ್ಪೇನಿಲ್ಲ, ಎಂದು ಡಿ.ಕೆ. ಸುರೇಶ್ ಹೇಳಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎರಡೂವರೆ ವರ್ಷದ ಪ್ರಶ್ನೆ ಅಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಕೆಲಸ ಮಾಡಬೇಕಿದೆ. ನಾವು ರಾಜ್ಯದ ಜನರ ಹಿತ ಕಾಯಬೇಕು. ಅವರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪಕ್ಷ, ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ.
ಅವರ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗುತ್ತಾರೆ. ಇಲ್ಲವಾದ್ರೆ ಇಲ್ಲ. ಅಣ್ಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ನನಗೂ ಇದೆ. ಇದರಲ್ಲಿ ಪ್ರಯತ್ನವೇನಿಲ್ಲ. ಹೈಕಮಾಂಡ್ ನಿರ್ಧರಿಸುತ್ತದೆ. ರಾಜ್ಯದಲ್ಲಿ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಉಪಮುಖ್ಯಮಂತ್ರಿಗಳು ಆಗಿದ್ದಾರೆ. ಪಕ್ಷಕ್ಕೆ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿರುವುದು ಅವರ ಕರ್ತವ್ಯ. ಆ ಕೆಲಸವನ್ನು ಮಾಡ್ತಿದ್ದಾರೆ.
ಎಲ್ಲಾ ಸಂದರ್ಭದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಆಗಲ್ಲ. ಕಾಂಗ್ರೆಸ್ ಸರ್ಕಾರವು 5 ವರ್ಷಗಳ ಕಾಲ ಆಡಳಿತ ನಡೆಸಲು, ಜನರಿಂದ ಬಹುಮತ ಪಡೆದಿದೆ. ಪಕ್ಷೇತರರು ಸೇರಿ 140 ಸ್ಥಾನಗಳನ್ನು ಹೊಂದಿದೆ. ಆಡಳಿತದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಡಿ.ಕೆ ಸುರೇಶ್ ಹೇಳಿದ್ದಾರೆ.

