ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನಲೆ ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಬೆಂಗಳೂರಿನಿಂದ ಕೊಪ್ಪಳ ತಾಲೂಕಿನ ಗಿಣಿಗೇರಿಗೆ ಲಘು ವಿಮಾನದಲ್ಲಿ ಆಗಮಿಸಿದ ಸಿಎಂ, ರಸ್ತೆ ಮೂಲಕ ಟಿಬಿ ಡ್ಯಾಂಗೆ ಭೇಟಿ ನೀಡಿದ್ರು.
ಎರಡು ವರ್ಷಗಳ ಬಳಿಕ ಡಿಬಿ ಡ್ಯಾಂ ಭರ್ತಿಯಾಗಿತ್ತು. ಇಂದು ಸಿಎಂ ಬಾಗಿನ ಅರ್ಪಿಸಬೇಕಿತ್ತು. ಆದರೆ, ಕ್ರಸ್ಟ್ ಗೇಟ್ ಮುರಿದ ಕಾರಣ, ಬಾಗಿನ ಅರ್ಪಿಸುವ ಬದಲು ಗೇಟ್ ಕೂರಿಸುವ ಕಾರ್ಯದ ಕುರಿತು ಮಾಹಿತಿ ಪಡೆದ್ರು. ಸದ್ಯ ತಾತ್ಕಾಲಿಕವಾಗಿ 48ಟನ್ ತೂಕದ 5 ಹಲಗೆಗಳ ಗೇಟ್ ನಿರ್ಮಾಣ ಮಾಡಲಾಗಿದೆ. ಸಂಜೆ ವೇಳೆಗೆ 20 ಅಡಿ ಅಗಲ, 60 ಅಡಿ ಉದ್ದದ ಗೇಟ್ ಅನ್ನು ಕೂರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಟಿಬಿ ಡ್ಯಾಂ ಮೂರು ರಾಜ್ಯಗಳ ಜನರ ಜೀವನಾಡಿಯಾಗಿದೆ. ಕಲ್ಯಾಣ ಕರ್ನಾಟಕದ ಪಂಚ ಜಿಲ್ಲೆಗಳ ಜನರ ದಾಹದ ಜೊತೆ ಸಕಲ ಜೀವಚರಗಳನ್ನ ಪೋಷಿಸುವ ಜಲಾಶಯವಾಗಿದೆ. ಈಗ ಅದೇ ಜಲಾಶಯಕ್ಕೆ ಡ್ಯಾಂನ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಜಲಕಂಟಕ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದೆಷ್ಟೇ ಜಲಾಶಯದ ಚೈನ್ ಲಿಂಕ್ ಕಟ್ ಆಗಿ ಕ್ರಸ್ಟ್ ಗೇಟ್ ಮುರಿದು ಹೋಗಿ, ಬದುಕು ಮುರಾಬಟ್ಟೆ ಆಗಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಅಂದ್ರೆ ಏನರ್ಥ? ಟಿಬಿ ಡ್ಯಾಂಗೆ ಬೋರ್ಡ್ ಇದೆ. ಅದಕ್ಕೆ ಚೇರ್ಮನ್ರನ್ನು ಯಾರು ನೇಮಕ ಮಾಡ್ತಾರೆ? ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡ್ತಾರೆ. ನಾನು ಈ ಬಗ್ಗೆ ರಾಜಕೀಯ ಮಾಡೋದಿಲ್ಲ. ಡ್ಯಾಂ ಗೇಟ್ ಕಟ್ ಆಗಿರೋದ್ರಿಂದ ರೈತರಿಗೆ ಯಾವುದೆ ಸಮಸ್ಯೆ ಆಗಲ್ಲ ಎಂದು ಹೇಳಿದ್ರು.