ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ದ ಸಿದ್ದರಾಮಯ್ಯ ಬಣ ತಿರುಗಿ ಬಿದ್ದಿದೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಎಲ್ಲ ಗೊಂದಲಗಳಿಗೆ ಉಸ್ತುವಾರಿಯೇ ಕಾರಣ ಎಂದು ಸಿದ್ದು ಆಪ್ತ ಸಚಿವ, ಶಾಸಕರು ಕಿಡಿಕಾರಿದ್ದಾರೆ. ವರಿಷ್ಠರಿಗೆ ಸುರ್ಜೇವಾಲಾ ವಿರುದ್ಧ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ಇನ್ನೂ ಸುರ್ಜೇವಾಲಾ ಅವರು ಯಾಕೆ ಅಭಿವೃದ್ದಿಯ ಬಗ್ಗೆ ಚರ್ಚಿಸಬೇಕು? ಶಾಸಕರ ಅಭಿಪ್ರಾಯಗಳನ್ನು ಕೇಳಿ ಅವುಗಳನ್ನು ಪುನಃ ಸಚಿವರಿಗೆ ಹೇಳುವುದರಿಂದ ಯಾವ ಲಾಭವಾಗುತ್ತಿದೆ? ಸಿಎಂ ಡಿಸಿಎಂ ದೂರವಿಟ್ಟು ಸಭೆ ಮಾಡುತ್ತಿರುವುದೇಕೆ? ಏಕ ಪಕ್ಷಿಯವಾಗಿ ಸಭೆ ನಡೆಸುತ್ತಿರುವುದು ಯಾಕೆ? ಎಂಬೆಲ್ಲ ಬೇಸರದ ಮಾತುಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಉಸ್ತುವಾರಿ ವಿರುದ್ದ ಸಿದ್ದರಾಮಯ್ಯ ಬಣದ ನಾಯಕರು ಸಿಡಿದೆದ್ದಿದ್ದಾರೆ. ಹೀಗಾಗಿ ಒನ್ ಟು ಒನ್ ಸಭೆಗೆ ಕಾಂಗ್ರೆಸ್ನಲ್ಲೇ ಅಪಸ್ವರ ಎದ್ದಿದೆ. ರಾಜ್ಯದಲ್ಲಿ ಉಸ್ತುವಾರಿ ಸುರ್ಜೇವಾಲಾ ನಡೆ ಸಿಎಂ ಆಡಳಿತದ ಬಗ್ಗೆ ಅನುಮಾನ ಹುಟ್ಟಿಸುವಂತಿದೆ. ಸುರ್ಜೇವಾಲಾ ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ ಎಂಬ ಅಸಮಾಧಾನವೂ ಹೆಚ್ಚಾಗಿದೆ. ಉಸ್ತುವಾರಿಗಳಾದವರೂ ಎಲ್ಲ ಬಣಗಳ ನಾಯಕರನ್ನು ವಿಶ್ವಾಸಕ್ಕೆ ಪಡೆಯಬೇಕು. ಆದರೆ ಸುರ್ಜೇವಾಲಾ ಅವರು ಒಂದು ಬಣದ ಮಾತುಗಳನ್ನು ಕೇಳುತ್ತಿದ್ದಾರೆ, ಅದರ ಪರವಾಗಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ನೇರವಾಗಿ ಸಿದ್ದರಾಮಯ್ಯ ಸಿದ್ದರಾಮಯ್ಯ ಬಣ ಸುರ್ಜೇವಾಲಾ ಅವರತ್ತ ಬೊಟ್ಟು ಮಾಡುತ್ತಿದೆ. ಹೀಗಾಗಿ ಉಸ್ತುವಾರಿಗೆ ಗೇಟ್ ಪಾಸ್ ಕೊಟ್ಟು ಎಲ್ಲರ ಮಾತುಗಳನ್ನು ಕೇಳುವ ಉತ್ತಮ ಉಸ್ತುವಾರಿ ಬೇಕೆಂಬ ಕೂಗು ಸಿದ್ದು ಬಣದಲ್ಲಿ ಜೋರಾಗಿದೆ. ರಾಜ್ಯದಲ್ಲಿ ಅಭಿವೃದ್ದಿಯ ಬಗ್ಗೆ ಚರ್ಚೆ ನಡೆಸಬೇಕಾದರೆ ಸಿಎಂ ಹಾಗೂ ಡಿಸಿಎಂ ಇದ್ದಾರೆ. ಅವರನ್ನು ಹೊರಗಿಟ್ಟು ಕೇವಲ ಆಯ್ದ ಸಚಿವರು ಹಾಗೂ ಶಾಸಕರ ಜೊತೆ ಮೀಟಿಂಗ್ ಮಾಡುತ್ತಿರುವುದಕ್ಕೆ ಸಿದ್ದು ಬಣ ಕೆಂಡವಾಗಿದೆ. ಮುಂದಿನ ಹಂತದಲ್ಲಿ ಉಸ್ತುವಾರಿ ಬದಲಾವಣೆಗೂ ಈ ನಾಯಕರು ಪಟ್ಟು ಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.