ರಾಜ್ಯದಲ್ಲಿ ಕೊಲ್ಡ್ರೀಫ್ ಸರಬರಾಜು ಆಗಿಲ್ಲ : ದಿನೇಶ್ ಗುಂಡೂರಾವ್ ಸ್ಪಷ್ಟನೆ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಡೆದ ಕೆಮ್ಮಿನ ಸಿರಪ್ ದುರಂತದ ನಂತರ, ಕರ್ನಾಟಕ ಸರ್ಕಾರವು ಕೂಡ ತುರ್ತು ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಮತ್ತು ಆಹಾರ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದಂತೆ, ಮಕ್ಕಳಿಗೆ ನೀಡುವ ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಮೇಲಿನ ಕಠಿಣ ನಿಗಾವಹಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಕಾಫ್ ಸಿರಪ್ ಕರ್ನಾಟಕದಲ್ಲಿ ಯಾವುದೇ ರೀತಿಯ ಸರಬರಾಜು ಆಗಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರ ಈಗ ಸಿರಪ್ ತಯಾರಿಕೆ ಮಾಡುವ ಎಲ್ಲಾ ಕಂಪನಿಗಳ ಮಾದರಿ ಸಂಗ್ರಹಣೆ ಮತ್ತು ತಪಾಸಣೆ ಮಾಡುತ್ತಿದೆ. ಜಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾ ಇಡಲು ನಿರ್ದೇಶನ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಮಾದರಿ ತಪಾಸಣೆಯ ರಿಪೋರ್ಟ್ ಬರುತ್ತದೆ ಮತ್ತು ತುರ್ತು ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯನ್ನು ಚುರುಕುಗೊಳಿಸಿ, ಪಾರದರ್ಶಕತೆಯೊಂದಿಗೆ ಔಷಧ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡು, ಕೆಮ್ಮಿನ ಸಿರಪ್ ಉತ್ಪನ್ನಗಳ ಸುರಕ್ಷತೆ ಖಚಿತಪಡಿಸುತ್ತಿದೆ. ಯಾವುದೇ ವಿತರಕ ಅಥವಾ ಚಿಲ್ಲರೆ ವ್ಯಾಪಾರಿ ಈ ಉತ್ಪನ್ನಗಳನ್ನು ಹೊಂದಿದ್ದರೆ ತಕ್ಷಣ ಮಾದರಿ ಪಡೆದು ಪರೀಕ್ಷೆ ನಡೆಸಬೇಕು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ ಮತ್ತು ಉಲ್ಲಂಘನೆ ಮಾಡಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author