ಕೊಪ್ಪಳ: ಹುಲಿಹೈದರ್ ಗುಂಪು ಘರ್ಷಣೆ ವೇಳೆ ಗ್ರಾಮ ತೊರೆದಿದ್ದ ನಾಗರಾಜ (25) ಎಂಬ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಗಾವತಿ ನಗರ ಪೋಲಿಸರು ಸ್ಥಳಕ್ಕ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಘರ್ಷಣೆ ನಂತರ ನಾಗರಾಜ ಬಸವಣ್ಣ ವೃತ್ತದ ಬಳಿಯ ಸಂಬಂಧಿಕರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೊಹರಂ ಹಬ್ಬದ ಮಾರನೇ ದಿನ ಹುಲಿಹೈದರ್ ಗ್ರಾಮದಲ್ಲಿ ವಾಲ್ಮೀಕಿ ವೃತ್ತದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ ಇಬ್ಬರು ಮೃತ ಪಟ್ಟಿದ್ದರು. 80ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿತ್ತು, ನಾಗರಾಜ ಅಣ್ಣ ಗೋಸಲಪ್ಪ ಎಂಬುವರ ಮೇಲೂ ಘರ್ಷಣೆ ಪ್ರಕರಣದಲ್ಲಿ ದೂರು ದಾಖಲಾಗಿತ್ತು. ಈ ಘಟನೆಯಲ್ಲಿ ಭಾಗಿಯಾಗದವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇದೇ ಕಾರಣದಿಂದ ನಾಗರಾಜ್ ಸೇರಿದಂತೆ ಹಲವರು ಗ್ರಾಮ ತೊರೆದಿದ್ದರು.
ನಾಗರಾಜ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಣ ಎನೆಂದು ತಿಳಿದು ಬಂದಿಲ್ಲ. ಕುಟುಂಬದವರನ್ನು ವಿಚಾರಣೆ ಮಾಡುತ್ತೇನೆ ಎಂದು ಗಂಗಾವತಿ ನಗರ ಪೊಲೀಸ್ ವೆಂಕಟಸ್ವಾಮಿ ತಿಳಿಸಿದ್ದಾರೆ.