ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು. ಕಳೆದ ಎರಡೂವರೆ ವರ್ಷದಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಇದು ಕಾಂಗ್ರೆಸ್ ಆಡಳಿತ ರೀತಿ. ಹೀಗಂತ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ, ಜೆಡಿಎಸ್ ಕಾರ್ಯಕರ್ತ ಮಹದೇವ್ ಎಂಬುವರು ಇತ್ತೀಚೆಗೆ ನಿಧನರಾಗಿದ್ರು. ಇಂದು ಮೃತ ಮಹದೇವ್ ಕುಟುಂಬಸ್ಥರನ್ನ ಭೇಟಿಯಾಗಿದ್ದ ನಿಖಿಲ್, ಸಾಂತ್ವನ ಹೇಳಿದ್ದಾರೆ.
ಬಳಿಕ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲಬೇಕು. ಗ್ಯಾರಂಟಿ, ಗ್ಯಾರಂಟಿ ಅಂತಾರೆ. ಅದನ್ನೂ ಕೂಡ ಸರಿಯಾಗಿ ಕೊಟ್ಟಿಲ್ಲ. ಯುವನಿಧಿ ಕೊಟ್ಟಿದ್ದೀರಾ? ಚುನಾವಣೆ ಸಂದರ್ಭದಲ್ಲಿ ಮಾತ್ರ ದುಡ್ಡು ಬಿಡುಗಡೆ ಮಾಡ್ತಾರೆ. ಈ ಸರ್ಕಾರದಲ್ಲಿ ಬಡವರು ಬದಕಲು ಆಗ್ತಿಲ್ಲ.
ನಮ್ಮ ಪಕ್ಷದ ಬಗ್ಗೆ ಕಲಾಪದಲ್ಲಿ ಕೀಳಾಗಿ ಮಾತನಾಡಿದ್ರು. ಜೆಡಿಎಸ್ 18 ಸೀಟ್ ಮುಂದೆ ಸಿಂಗಲ್ ಡಿಜಿಟ್ಗೆ ಬರುತ್ತೆ, ಅಸ್ತಿತ್ವ ಇಲ್ಲ ಅಂತೆಲ್ಲಾ ಲೇವಡಿ ಮಾಡಿದ್ರು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು?. ಅಲ್ಲಿನ ಜನರು ಕಾಂಗ್ರೆಸ್ ಪರಿಸ್ಥಿತಿ ತೋರಿಸಿದ್ದಾರೆ.
ಬಂಡವಾಳ ಇದ್ದಿದ್ದಕ್ಕೆ ಕುಮಾರಸ್ವಾಮಿಗೆ ರೆಡ್ ಕಾರ್ಪೆಟ್ ಹಾಕಿ ಎನ್ಡಿಎಗೆ ಸೇರಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರಪ್ಪನಾಣೆ ಗೆಲ್ಲಲ್ಲ ಅಂತಾ ಕಾಂಗ್ರೆಸ್ನವರು ಭಾಷಣ ಬಿಗಿದ್ರು. ಆದ್ರೆ, ಮಂಡ್ಯ ಜನರ ಆಶೀರ್ವಾದದಿಂದ ದಾಖಲೆ ಗೆಲುವು ಸಿಕ್ತು. ಬಂಡವಾಳ ಇರೋದಕ್ಕೆ ಕುಮಾರಣ್ಣನ ಗೆಲ್ಲಿಸಿರೋದು . ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ, ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲಿಲ್ಲ ಎಂದು, ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಮದ್ದೂರು ತಾಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ? ಇಲ್ಲಿರುವ ಶಾಸಕರ ನಡವಳಿಕೆ ಸರಿಯಿಲ್ಲ. ಜಿಲ್ಲೆಯ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಮಂಡ್ಯ ಜಿಲ್ಲೆಗೆ ಅವರು ಏನು ಬಿರುದು ಕೊಟ್ಟರು? ಛತ್ರಿಗಳು ಅಂದ್ರು ಅದರ ಅರ್ಥ ತಿಳಿದುಕೊಳ್ಳಬೇಕೆಂದು, ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

