ಇದೇ ಆಗಸ್ಟ್ 10ರಂದು ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯಾಗ್ತಿದೆ. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೊದಲ ರೌಂಡ್ಸ್ ಹೋಗಿದ್ದಾರೆ. ಆಗಸ್ಟ್ 5ರಂದು ಹಳದಿ ಮಾರ್ಗದ ಮೆಟ್ರೋದಲ್ಲಿ ಸಂಚರಿಸಿ, ಪರಿಶೀಲನೆ ನಡೆಸಿದ್ರು. ಬಳಿಕ ಮಾತನಾಡುತ್ತಾ, ಗಲಾಟೆ ಮಾಡ್ತಿರುವ ಸಂಸದರು, ಅನುದಾನ ಕೊಡಿಸಿದ್ರೆ ಒಳ್ಳೆಯದು. ಬರೀ ತಪ್ಪು ಕಂಡು ಹಿಡಿದು ಮಾತಾಡ್ತಾರೆ.
ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು, ನಮ್ಮ ಜವಾಬ್ದಾರಿ ನಿರ್ವಹಣೆ ಮಾಡ್ತಿದ್ದೇವೆ. ತೇಜಸ್ವಿ ಸೂರ್ಯ ಆತುರದಲ್ಲಿರುವ ಹುಡುಗ. ಅನುಭವ ಇಲ್ಲ ಅಂತಾ, ಡಿಕೆಶಿ ಟೀಕಿಸಿದ್ದಾರೆ.
ಇದೇ ವಿಚಾರವಾಗಿ, ಡಿಕೆಶಿಗೆ ಸಂಸದ ತೇಜಸ್ವಿ ಸೂರ್ಯ ಕೂಡ ತಿರುಗೇಟು ಕೊಟ್ಟಿದ್ದಾರೆ. ನಾನು ಹೊಸ ತಲೆಮಾರಿನವನು. ಅರ್ಜೆಂಟ್ ಆಗಿ ಕೆಲಸ ಆಗಬೇಕಿದೆ. ಹೀಗಾಗಿ ಅರ್ಜೆಂಟ್ ಮಾಡ್ತಿದ್ದೇನೆ. ಬೆಂಗಳೂರಿನ ಈಜಿಪುರದಲ್ಲಿ 2 ಕಿಲೋ ಮೀಟರ್ ಫ್ಲೈಓವರ್ ಕಟ್ಟೋಕೆ, ಎಂಟೂವರೆ ವರ್ಷ ಆಯ್ತು. ಅದು ನಮ್ಮ ತಲೆಮಾರಿಗೆ ಸರಿ ಅನ್ನಿಸಲ್ಲ. ಸಿವಿಲ್ ವರ್ಕ್ ಕಂಪ್ಲೀಟ್ ಆದ್ಮೇಲೂ, 3ರಿಂದ 4 ವರ್ಷಗಳಿಂದ ಆಗೆಯೇ ಇದೆ. ಈಗಲೂ ಅರ್ಜೆಂಟ್ ಮಾಡಬಾರದು ಅಂದ್ರೆ, ಇನ್ಯಾವ ವಿಷಯದಲ್ಲಿ ಅರ್ಜೆಂಟ್ ಮಾಡ್ಬೇಕು.
ಕಾಂಗ್ರೆಸ್ಸಿಗರದ್ದು ಡಿಲೇ ಮಾಡೋದೇ ಪಾಲಿಟಿಕ್ಸ್. ಇಂಥಾ ಸ್ಪೀಡಲ್ಲಿ ಕಾಂಗ್ರೆಸ್ ಪಕ್ಷ ದೇಶ ನಡೆಸಿದ್ರಿಂದಲೇ, ನಮ್ಮ ದೇಶಕ್ಕೆ ಈ ಸ್ಥಿತಿಗೆ ಬಂದಿದೆ.
ಬೆಂಗಳೂರಿನಲ್ಲಿ ಮೆಟ್ರೋ ಬೇಕಾಗಿರೋದು, ಎಸ್ಯುವಿ ಇಟ್ಕೊಂಡು ಓಡಾಡೋ ಜನಕ್ಕಲ್ಲ. ಸಾಮಾನ್ಯ ಜನಕ್ಕೆ ಬೇಕಾಗಿದೆ.
ಅರ್ಜೆಂಟ್ ಮಾಡ್ತಾರೆ ಅಂತಾ ಬೈಯ್ಯೋರಿಗೆ, ಮೆಟ್ರೋ ಲೈನಿಗೆ ಅವರ ಕೊಡುಗೆ ಏನಿದೆ. 4 ವರ್ಷದ ಹಿಂದೆ ಭೂಮಿ ಸಿಗದೇ, ಈ ಯೋಜನೆ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಆಗ ನಾನು ಎಲ್ಲರನ್ನೂ ಕರೆಸಿ, ಪಂಚಾಯಿತಿ ಮಾಡಿದ್ದೆ. ಅವತ್ತು ಇವರೆಲ್ಲಾ ಎಲ್ಲಿದ್ರು. ಸಿವಿಲ್ ವರ್ಕ್, ಟೆಂಡರ್ನಲ್ಲಿ ಪ್ರಾಬ್ಲಂ ಇದ್ದಾಗ, ಕೇಂದ್ರ-ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಬಿಎಂಆರ್ಸಿಎಲ್ಗೆ 2024ರ ಜನವರಿವರೆಗೂ, ಫುಲ್ ಟೈಂ ಎಂಡಿ ಇರಲಿಲ್ಲ. ಇದಕ್ಕಾಗಿಯೂ ನಾನು ಹೋರಾಟ ಮಾಡಿದ್ದೇನೆ. ಆಗ ಇವರೆಲ್ಲಾ ಎಲ್ಲಿದ್ರು ಅಂತಾ, ತೇಜಸ್ವಿ ಸೂರ್ಯ ಗುಡುಗಿದ್ದಾರೆ.