ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ರು ಬಹಳ ಹೆಸರು ಗಳಿಸಿದ್ದು ಮಾತ್ರ ‘ಟಗರು’ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ‘ಡಾಲಿ’ ಎಂಬ ಹೆಸರಿನಿಂದ ನಟ ಧನಂಜಯ ಜನಪ್ರಿಯರಾದರು. ಅದಷ್ಟೇ ಅಲ್ಲದೆ ‘ಪುಷ್ಪ’ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೂ ಕೂಡ ಚಿರಪರಿಚಿತರಾದರು. ಇನ್ನು ‘ಬಡವ ರಾಸ್ಕಲ್’ ಸಿನಿಮಾಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿ ಹೆಸರು ಪಡೆದರು. ಇಷ್ಟೆಲ್ಲ ಕೆಲಸದ ನಡುವೆಯೂ ಸಹ ನಟ ಡಾಲಿ, ‘ಟ್ವೆಂಟಿ ಒನ್ ಅವರ್ಸ್’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾವನ್ನು ಜೈಶಂಕರ್ ಪಂಡಿತ್ ನಿರ್ದೇಶಿಸಿದ್ದು, ಈ ಸಿನಿಮಾ ಕೆಆರ್ಜಿ ಸ್ಟುಡಿಯೋಸ್ ಮೂಲಕ ಇದೆ 20 ರಂದು ತೆರೆ ಕಾಣಲಿದೆ. ಇನ್ನು ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚಿಗಷ್ಟೇ ಮುಗಿದಿದ್ದು, ಧನಂಜಯ ಸೇರಿದಂತೆ ಇಡೀ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ನಿನ್ನೆ ಈ ಚಿತ್ರದ ಕುರಿತು ಪೋಸ್ಟ್ ಹಾಕಿದಾಗ, ಯಾವ ಗ್ಯಾಪ್ ನಲ್ಲಿ ಈ ಸಿನಿಮಾ ಮಾಡಿದ್ದೀರಾ? ಅಂತ ಗೆಳೆಯರು ಕೇಳಿದರು. ಮೊದಲ ಲಾಕ್ಡೌನ್ ನಂತರ ಮಾಡಿರುವ ಸಿನಿಮಾ ಇದು. ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿರುವುದರಿಂದ ಕನ್ನಡ ಹಾಗೂ ಮಲೆಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ಪೂರ್ತಿ ಕನ್ನಡದ ಸಂಭಾಷಣೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ. ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ತಂಡ. ಬಹಳ ದಿನಗಳ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರಲ್ಲಿ ನಟಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ” ಎಂದರು ಡಾಲಿ ಧನಂಜಯ್ ತಿಳಿಸಿದ್ದಾರೆ.
“ನಾನು ಮೂಲತಃ ಕರ್ನಾಟದವನು. ಆದರೆ ಕೇರಳದಲ್ಲಿದ್ದೀನಿ. ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. 21 ಗಂಟೆಗಳಲ್ಲಿ ನಡೆಯುವ ವಿಶೇಷ ಕಥೆ ಹೊಂದಿರುವ ಚಿತ್ರವಿದು. ಧನಂಜಯ್ ನಿರ್ದೇಶಕರ ನಟ. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಖ್ಯಭೂಮಿಕೆಯಲ್ಲಿ ದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ, ನೋಡಿ ಹಾರೈಸಿ” ಎಂದು ನಿರ್ದೇಶಕ ಜೈಶಂಕರ್ ಪಂಡಿತ್ ಹೇಳಿದ್ದಾರೆ.
ಇನ್ನು ಈ ಚಿತ್ರಕ್ಕೆ ರುಪರ್ಟ್ ಫರ್ನಾಂಡಿಸ್ ಸಂಗೀತ ನಿರ್ದೇಶನ ಮಾಡಿದ್ದು, ತಿರುನವುಕ್ಕರಸು ಛಾಯಾಗ್ರಹಣ ಮಾಡಿದ್ದಾರೆ. ರಿಚರ್ಡ್ ಕೆವಿನ್ ಸಂಕಲನ ಹಾಗೂ ಪ್ರತಾಪ್ ಆರ್ ಮೆಂಡನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದ್ದು, ಸುಕೃತ್ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾಷಣೆ ಬರೆದಿದ್ದಾರೆ. ಶೋಭ ಅಂಜನಪ್ಪ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ