ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಸಾಮಾನ್ಯನೇ ಇರಲಿ ಅಥವಾ ವಿಐಪಿಗಳೇ ಇರಲಿ. ಕಾನೂನಿಗೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು. ಇಲ್ಲೀಗ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು ಕೂಡ ಒಂದಲ್ಲ ಒಂದು ತಪ್ಪು ಎಸಗುವ ಮೂಲಕ ಶಿಕ್ಷೆ ಅನುಭವಿಸಿದ್ದಾರೆ. ಜೈಲು ಮುಖ ನೋಡಿ ಹೊರಬಂದವರೆ. ಹಾಗಾದರೆ ಕನ್ನಡದಲ್ಲಿ ಯಾವೆಲ್ಲ ನಟ, ನಟಿಯರು ಯಾವ ತಪ್ಪು ಮಾಡಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದಾರೆ? ಇಂಥದ್ದೊಂದು ಪ್ರಶ್ನೆ ಬಹುತೇಕ ಜನರಲ್ಲಿ ಇದ್ದೇ ಇರುತ್ತೆ. ಆ ಕುರಿತು ಒಂದು ವರದಿ.
ದರ್ಶನ್ ಎರಡು ಸಲ ಜೈಲು
ಸದ್ಯ ಇದೀಗ ಸುದ್ದಿಯಲ್ಲಿರುವ ಸೆಲಿಬ್ರಿಟಿ ಅಂದರೆ ಅದು ದರ್ಶನ್. ಅವರಿಂದಲೇ ಶುರು ಮಾಡುವುದಾದರೆ, ದರ್ಶನ್ ಎರಡು ಬಾರಿ ಜೈಲಿಗೆ ಹೋಗುವಂತಾಗಿದೆ. ಈ ಹಿಂದೆ ಅಂದರೆ, ೨೦೧೧, ಸೆಪ್ಟೆಂಬರ್ ೮ರಂದು ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕಾರಣಕ್ಕೆ ಪತ್ನಿ ವಿಜಯಲಕ್ಷ್ಮೀ ಅವರೇ ವಿಜಯನಗರ ಪೊಲೀಸ್ ಠಾಣೆಗೆ ದೈಹಿಕವಾಗಿ ಹಿಂಸೆ ನೀಡಿ, ಹಲ್ಲೆ ಮಾಡಿದ್ದರು ಎಂಬುದಾಗಿ ದೂರು ನೀಡಿದ್ದರು. ದೂರು ದಾಖಲಾದ ದಿನವೇ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೆಲ ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಅಂಬರೀಶ್ ಇಬ್ಬರ ನಡುವೆ ರಾಜಿ ಮಾಡಿಸಿದ್ದರು. ನಂತರ ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರು ರೇಣುಕಾಸ್ವಾಮಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ೨೯ ದಿನಗಳ ಕಾಲ ಜೈಲು ವಾಸಿಯಾಗಿದ್ದಾರೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಸದ್ಯ ಹೊರ ಬರುವ ಲಕ್ಷಣಗಳು ಕಾಣುತ್ತಿಲ್ಲ.
ಹಲ್ಲೆ: ದುನಿಯಾ ವಿಜಯ್ ಜೈಲುಪಾಲು
೨೦೧೮ ಸೆಪ್ಟೆಂಬರ್ ೨೪ರಂದು ಫಿಟ್ನೆಸ್ ತರಬೇತುದಾರ ಮಾರುತಿ ಗೌಡ ಎಂಬುವರ ಮೇಲೆ ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಸಂಬಂಧ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು. ಆದರೆ, ಹಳೆ ದ್ವೇಷದಿಂದ ಇದಕ್ಕೆಲ್ಲ ಕಾರಣ ಎಂದು ದುನಿಯಾ ವಿಜಯ್ ವಾದಿಸಿದ್ದರು. ಜೈಲಿನಲ್ಲಿ ಒಂದಷ್ಟು ದಿನ ವಿಜಯ್ ಕಾಲ ಕಳೆದು ಹೊರಬಂದಿದ್ದರು.
ಮಾಸ್ತಿಗುಡಿ ದುರಂತ-ನಿರ್ದೇಶಕ, ನಿರ್ಮಾಪಕ, ಸ್ಟಂಟ್ ಮಾಸ್ಟರ್ ಜೈಲಿಗೆ
೨೦೧೬ ನವೆಂಬರ್ ೮ ರಂದು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ವೇಳೆ ಉದಯ್ ಮತ್ತು ಅನಿಲ್ ಎಂಬ ಖಳ ನಟರು ಸಾವನ್ನಪಿದ್ದರು. ತಿಪ್ಪಗೊಂಡನಹಳ್ಳಿ ಕೆರೆ ಸಮೀಪ ಚಿತ್ರೀಕರಣ ನಡೆಯುತ್ತಿದ್ದಾಗ, ಹೆಲಿಕಾಫ್ಟರ್ ನಿಂದ ಈ ನಟರು ಧುಮುಕುವ ದೃಶ್ಯವಿತ್ತು. ಆಗ ಅವರು ಜಿಗಿದಿದ್ದರು. ಯಾವುದೇ ಮುಂಜಾಗ್ರತೆ ಕ್ರಮ ಪಾಲಿಸದಿದ್ದರಿಂದ ಅವರು ಕೆರೆಗೆ ಜಿಗಿದು ಸಾವನ್ನಪ್ಪಿದ್ದರು. ಅದೊಂದು ಸ್ಟಂಟ್ ದೃಶ್ಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ, ನಿರ್ದೇಶಕ ನಾಗಶೇಖರ್ ಹಾಗು ನಿರ್ಮಾಪಕ ಸುಂದರ್ ಗೌಡ ಅವರನ್ನು ಬಂಧಿಸಲಾಗಿತ್ತು. ಇವರ ಜೊತೆ ಮ್ಯಾನೇಜರ್ ಭರತ್ ಅವರನ್ನೂ ಕೂಡ ಬಂಧಿಸಲಾಗಿತ್ತು. ಈಜು ಬಾರದೆ ಅಸುನೀಗಿದ ಗೆಳೆಯರ ಕುಟುಂಬ ಭೇಟಿ ಮಾಡಿದ್ದ ದುನಿಯಾ ವಿಜಯ್ ಸಹಾಯ ಹಸ್ತ ಚಾಚಿದ್ದರು.
ವರಕ್ಷಿಣೆ ಕೇಸ್ ನಟಿ ಅಭಿನಯ ಜೈಲು
೨೦೨೨ರ ಡಿಸೆಂಬರ್ ೧೪ ರಂದು, ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಅನುಭವ ಖ್ಯಾತಿಯ ಅಭಿನಯ ಅವರನ್ನು ಬಂಧಿಸಲಾಗಿತ್ತು. ಕಾರಣ, ಅವರ ಅತ್ತಿಗೆ ಅವರಿಗೆ ವರದಕ್ಷಿಣೆ ಕಿರುಕುಳ ಮತ್ತು ಕುಟುಂಬ ದೌರ್ಜನ್ಯ ವಿಷಯಕ್ಕೆ ಸಂಬಂಧಿಸಿದಂತೆ ಅಭಿನಯ ಅವರಿಗೆ ೨ ವರ್ಷ ಜೈಲು ಹಾಗು ಅವರ ತಾಯಿಗೆ ಐದು ವರ್ಷ ಜೈಲು ಶಿಕ್ಷೆಯಾಗಿತ್ತು. ಅದು ಭಾರೀ ಚರ್ಚೆಗೂ ಕಾರಣವಾಗಿತ್ತು. ಅದಕ್ಕೂ ಮುನ್ನ ಅರೆಸ್ಟ್ ಭೀತಿಯಿಂದ ಅಭಿನಯ ಎಸ್ಕೇಪ್ ಕೂಡ ಆಗಿದ್ದರು. ಎಲ್ಲೆಲ್ಲೂ ಮೋಸ್ಟ್ ವಾಂಟೆಡ್ ಪೋಸ್ಟರ್ ಅಂಟಿಸಲಾಗಿತ್ತು.
ಡ್ರಗ್ಸ್ ಕೇಸ್- ರಾಗಿಣಿ ದ್ವಿವೇದಿ- ಸಂಜನಾ ಗಲ್ರಾನಿ ಜೈಲು
೨೦೨೦ ಸೆ.೧೪ ರಂದು ಡ್ರಗ್ಸ್ ಪ್ರಕರಣ ಹಿನ್ನೆಲೆಯಲ್ಲಿ ರಾಗಿಣಿ ದ್ವಿವೇದಿ ಜೈಲುಪಾಲಾಗಿದ್ದರು. ಸಂಜನಾ ಸೆ.೧೭ರಂದು ಜೈಲು. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅಂದರೂ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ವ್ಯಾಪಕ ಚರ್ಚೆ ನಡೆದಿತ್ತು. ಜಾಮೀನು ಅರ್ಜಿ ಸಲ್ಲಿಸಿದ್ದರೂ, ಜಾಮೀನು ನಿರಾಕರಣೆಯಾಗಿತ್ತು. ಈ ಪ್ರಕರಣದಲ್ಲಿ ಹಲವು ನಟ, ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಒಂದಷ್ಟು ಉದ್ಯಮಿಗಳೂ ಇದ್ದರು. ತಿಂಗಳುಗಳ ಕಾಲ ಜೈಲಿನಲ್ಲಿದ್ದು ಹೊರಬಂದಿದ್ದರು.
ಪೋಸ್ಟ್ ಮಾಡಿ ಜೈಲು ಸೇರಿದ ಚೇತನ್ ಅಹಿಂಸಾ
ನಟ ಹಾಗು ಸಾಮಾಜಿಕ ಹೋರಾಟಗಾರ ಆ ದಿನಗಳ ಚೇತನ್ ಅಹಿಂಸ ಅವರು, ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಟ್ವೀಟ್ ಮಾಡಿದ್ದರು. ಆ ಪೋಸ್ಟ್ ವೈರಲ್ ಆಗಿತ್ತು. ಆ ಕಾರಣಕ್ಕೆ ವಿಚಾರಣೆಗೆ ಒಳಪಡಿಸಿ, ಬಂಧಿಸಲಾಗಿತ್ತು. ಆ ಟ್ವೀಟ್ ನೋಡಿ, ಶೇಷಾದ್ರಿಪುರಂ ಪೊಲೀಸರ್ ಸ್ವಯಂ ದೂರು ದಾಖಲಿಸಿದ್ದರು. ಹಿಂದುಗಳ ಬಗ್ಗೆ ಮಾತಾಡಿದ್ದರು, ತಿರುಪತಿ ದೇವಾಲಯ ಕುರಿತು ಹೇಳಿಕೆ ನೀಡಿದ್ದರು. ಒಂದಲ್ಲ ಒಂದು ವಿವಾದ ಕೇಂದ್ರ ಸರ್ಕಾರ ವೀಸಾ ರದ್ದು ಮಾಡಿತ್ತು. ಈ ಬಗ್ಗೆ ಹಲವರು ಧ್ವನಿ ಎತ್ತಿದ್ದರು.
ರೀಲ್ಸ್ ರಾಣಿ ಸೋನು ಜೈಲು
ಬಿಗ್ ಬಾಸ್ ಸ್ಪರ್ಧಿ ಹಾಗು ನಟಿ ಸೋನು ಶ್ರೀನಿವಾಸ ಗೌಡ ಅವರು ರೀಲ್ಸ್ ರಾಣಿ ಎಂದೇ ಪರಿಚಯ. ಇವರು ೨೦೨೪ ರ ಮಾರ್ಚ್ ೨೫ ರಂದು ಅಕ್ರಮವಾಗಿ ಬಾಲಕಿಯೊಬ್ಬಳನ್ನು ದತ್ತು ಪಡೆದರು ಎನ್ನುವ ವಿಚಾರಕ್ಕೆ ಪೊಲೀಸರು ವಿಚಾರಣೆ ನಡೆಸಿ, ೧೧ ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಹೊರಬಂದ ಸೋನು ಶ್ರೀನಿವಾಸಗೌಡ ಪರಪ್ಪನ ಅಗ್ರಹಾರ ಜೈಲಿನ ಅನುಭವ ಬಿಚ್ಚಿಟ್ಟಿದ್ದರು.
ದರ್ಶನ್ ಆಪ್ತ ಪ್ರದೋಷ್ ಜೈಲು
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಕೂಡ ಜೈಲು ಸೇರಿದ್ದಾರೆ. ಇವರೇನು ಹೇಳಿಕೊಳ್ಳುವಂತಹ ಸೆಲಿಬ್ರಿಟಿ ಅಲ್ಲ, ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಸೆಲಿಬ್ರಿಟಿ ಜೊತೆ ಇದ್ದರು ಎಂಬ ಕಾರಣಕ್ಕೆ ಅದೇ ಖಯಾಲಿ ಇತ್ತು. ರೇಣುಕಾಸ್ವಾಮಿ ಹತ್ಯೆ ಸಂದರ್ಭದಲ್ಲಿ ಇವರ ಪಾತ್ರವೂ ಪ್ರಮುಖವಾಗಿತ್ತು ಎಂಬ ಆರೋಪದಡಿ ಇವರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ.