ನಟ ದರ್ಶನ್ ಅತ್ತ ರೇಣುಕಾಸ್ವಾಮಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾರೆ. ಇತ್ತ, ಅವರ ಅಭಿನಯದ ಶಾಸ್ತ್ರಿ ಸಿನಿಮಾ ಇದೀಗ ಮರುಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಶುಕ್ರವಾರ ಜು.12 ರಂದು ರಾಜ್ಯಾದ್ಯಂತ ಸಿನಿಮಾ ಮರುಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಆಗಿದ್ದೇ ತಡ, ಅವರ ಅಭಿಮಾನಿ ವರ್ಗ ಚಿತ್ರಮಂದಿರದ ಮುಂದೆ ಸಾಲುಗಟ್ಟಿ ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದಾರೆ. ಹೌದು, ಈ ಸಿನಿಮಾ 2005 ರಲ್ಲಿ ಬಿಡುಗಡೆಯಾಗಿತ್ತು. ಪಿ.ಎನ್ ಸತ್ಯ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ದರ್ಶನ್ ಅವರ ಆಪ್ತರಾಗಿದ್ದ ಅಣಜಿ ನಾಗರಾಜ್ ಅವರು ಈ ಸಿನಿಮಾಗೆ ಬಂಡವಾಳ ಹಾಕಿದ್ದರು. ದರ್ಶನ್ ಅವರ ಮೊದಲ ಚಿತ್ರ ಮೆಜೆಸ್ಟಿಕ್ ನಿರ್ದೇಶಿಸಿದ್ದ ಪಿ.ಎನ್. ಸತ್ಯ ಅವರೇ ಶಾಸ್ತ್ರಿಗೂ ನಿರ್ದೇಶನ ಮಾಡಿದ್ದರಿಂದ ಸಿನಿಮಾಗೆ ಸಖತ್ ಕ್ರೇಜ್ ಇತ್ತು. ಬಿಡುಗಡೆಯಾದ ಸಂದರ್ಭದಲ್ಲೇ ಸಿನಿಮಾ ಸಾಕಷ್ಟು ಸುದ್ದಿಯಾಗಿತ್ತು. ಗಳಿಕೆಯಲ್ಲೂ ಮುಂದೆ ಇತ್ತು. ಈ ಸಿನಿಮಾ ಬಳಿಕ ದರ್ಶನ್ ಅವರ ಫ್ಯಾನ್ಸ್ ಬಳಗ ಇನ್ನಷ್ಟು ಹೆಚ್ಚಿದ್ದು ಸುಳ್ಳಲ್ಲ.
ಈಗ ದರ್ಶನ್ ಜೈಲಿನಲ್ಲಿದ್ದಾರೆ. ಅವರ ಅಭಿನಯದ ಶಾಸ್ತ್ರಿ ಸಿನಿಮಾ ಇದೀಗ ಮರುಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಸಖತ್ ಮೆಚ್ಚುಗೆ ಸಿಕ್ಕಿದೆ. ಫ್ಯಾನ್ಸ್ ಮಗಿಬಿದ್ದು ಸಿನಿಮಾ ನೋಡೋಕೆ ಥಿಯೇಟರ್ ಮುಂದೆ ಸಾಲುಗಟ್ಟಿದ್ದಾರೆ. ಬೆಂಗಳೂರಿನ ಪ್ರಸನ್ನ ಹಾಗು ಉಲ್ಲಾಳದಲ್ಲಿರುವ ಚಿತ್ರಮಂದಿರದಲ್ಲಿ ಶಾಸ್ತ್ರಿ ಸಿನಿಮಾ ಮರುಬಿಡುಗಡೆಯಾಗಿದೆ. ಮುಂಜಾನೆ ಪ್ರದರ್ಶನದ ಜೊತೆಗೆ ಮಾರ್ನಿಂಗ್ ಶೋ ಮಾತ್ರ ಈ ಸಿನಿಮಾಗೆ ಕೊಡಲಾಗಿತ್ತು. ಮುಂಜಾನೆಯಿಂದಲೇ ದರ್ಶನ್ ಅವರ ಫ್ಯಾನ್ಸ್ ಥಿಯೇಟರ್ ಎದುರು ಬಂದು ಸಾಲಿನಲ್ಲಿ ನಿಂತು ಪ್ರೀತಿಯಿಂದಲೇ ಟಿಕೆಟ್ ಖರೀದಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಯ ಡಿ ಬಾಸ್ ಅವರ ಕಟೌಟ್ ಇಲ್ಲವೆಂದು ಗಮನಿಸಿದ ಅಭಿಮಾನಿಗಳು, ಮೊದಲು ಡಿ ಬಾಸ್ ಅವರ ಪೋಸ್ಟರ್ ಹಾಕಬೇಕು ಎಂದು ಪಟ್ಟು ಹಿಡಿದು, ಪೋಸ್ಟರ್ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಮೊದಲು ಬಾಸ್ ಅವರ ಪೋಸ್ಟರ್ ಹಾಕಿದರೆ ಮಾತ್ರ ಟಿಕೆಟ್ ಖರೀದಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ನಂತರ ಚಿತ್ರಮಂದಿರದ ಸಿಬ್ಬಂದಿ ಪೋಸ್ಟರ್ ಹಾಕಿದ ಬಳಿಕವೇ ಫ್ಯಾನ್ಸ್ ಸಿನಿಮಾ ಮಂದಿರದೊಳಗೆ ಹೋಗಿ ಸಿನಿಮಾವ್ನ್ನು ವೀಕ್ಷಿಸಿದ್ದಾರೆ.
ಇನ್ನು, ಈ ಸಿನಿಮಾ ರಾಜ್ಯದ ನಲವತ್ತು ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದು, ಮೈಸೂರು, ದಾವಣೆಗೆರೆ ಸೇರಿದಂತೆ ಇತರೆ ಪಟ್ಟಣಗಳಲ್ಲೂ ಶಾಸ್ತ್ರಿ ಮರು ಬಿಡುಗಡೆಯಾಗಿದೆ. ಅಲ್ಲೆಲ್ಲಾ ಕಡೆಯೂ ದರ್ಶನ್ ಕ್ರೇಜ್ ಹೆಚ್ಚಾಗಿದೆ. ಸಿನಿಮಾ ನೋಡಲು ಆ ಭಾಗದ ಅಭಿಮಾನಿಗಳು ಮುಗಿಬಿದಿದ್ದಾರೆ. ಇನ್ನು, ಈ ಚಿತ್ರವನ್ನು ಶಂಕರ್ ಎಂಬುವವರು ವಿತರಣೆ ಹಕ್ಕು ಪಡೆದು ರೀ ರಿಲೀಸ್ ಮಾಡಿದ್ದಾರೆ. ಅವರು ಒಂದು ವರ್ಷಕ್ಕೆ ಮಾತ್ರ ಚಿತ್ರವನ್ನು ಲೀಸ್ ಗೆ ಪಡೆದಿದ್ದರು. ಈಗಾಗಲೇ ಲೀಸ್ ಪಡೆದು ಆರು ತಿಂಗಳು ಕಳೆದಿತ್ತು. ಇನ್ನು ಆರು ತಿಂಗಳು ಮಾತ್ರ ಬಾಕಿ ಇತ್ತು. ಯಾವಾಗ ರೀ ರಿಲೀಸ್ ಮಾಡಬೇಕು ಎಂಬ ಬಗ್ಗೆ ಯೋಚಿಸುತ್ತಿರುವಾಗಲೇ, ಅವರು ಇದೇ ಸರಿಯಾದ ಸಮಯ, ಈಗ ನೋಡಿದರೆ, ಕನ್ನಡದಲ್ಲಿ ಥಿಯೇಟರ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಯಾವ ಸಿನಿಮಾ ಕೂಡ ಇಲ್ಲ. ಹಾಗಾಗಿ, ಶಾಸ್ತ್ರಿ ಸಿನಿಮಾ ರಿಲೀಸ್ ಮಾಡೋಣ ಅಂತ ಯೋಚಿಸಿ, ರೀ ರಿಲೀಸ್ ಮಾಡಿದ್ದಾರೆ. ಅವರು ಮಾಡಿದ ಶುಭಘಳಿಗೆ ಚೆನ್ನಾಗಿತ್ತು. ಹಾಗಾಗಿ, ಗಳಿಕೆ ಕೂಡ ಚೆನ್ನಾಗಿಯೇ ಆಗಿದೆ ಎಂಬುದು ಅವರ ಮಾತು.
ಅದೇನೆ ಇರಲಿ, ದರ್ಶನ್ ಅವರ ಫ್ಯಾನ್ಸ್ ದೊಡ್ಡದಿದೆ. ಅವರನ್ನು ಆರಾಧಿಸುವ ಅಭಿಮಾನಿ ವರ್ಗವೂ ಹಾಗೇ ಇದೆ. ಹಾಗಾಗಿ ಶಾಸ್ತ್ರಿ ಸಿನಿಮಾ ಯಾವಾಗ ರೀ ರಿಲೀಸ್ ಆಗುತ್ತೆ ಅಂತ ಗೊತ್ತಾಯ್ತೋ ಫ್ಯಾನ್ಸ್ ಅಲರ್ಟ್ ಆಗಿ, ಬಾಸ್ ಸಿನಿಮಾ ನೋಡಲೇಬೇಕು ಅಂತ ಕಾದಿದ್ದರು. ಈ ಶುಕ್ರವಾರ ಸಿನಿಮಾ ರೀ ರಿಲೀಸ್ ಆಗುತ್ತಿದ್ದಂತೆಯೇ, ಎಲ್ಲರೂ ಒಟ್ಟಿಗೆ ಸಿನಿಮಾ ನೋಡಿದ್ದಾರೆ. ಸದ್ಯ ದರ್ಶನ್ ಜೈಲಿನಲ್ಲಿದ್ದರೂ, ಅವರ ಹವಾ ಮಾತ್ರ ಮುಂದುವರೆದಿದೆ ಎಂಬುದಕ್ಕೆ ಶಾಸ್ತ್ರಿ ಸಿನಿಮಾದ ಕ್ರೇಜ್ ಸಾಕ್ಷಿ.