ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಬಿಜೆಪಿ–ಜೆಡಿಎಸ್ ಮೈತ್ರಿ ಮುಂದುವರಿಕೆಯನ್ನು ಸ್ವಾಗತಿಸಿದ್ದಾರೆ. ಮೈತ್ರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಗತ್ಯ. ಈ ಬಗ್ಗೆ ರಾಜ್ಯಾಧ್ಯಕ್ಷರು, ದೇವೇಗೌಡರು ಎಲ್ಲರೂ ಹೇಳಿರುವರು. ಲೋಕಸಭೆ ಚುನಾವಣೆಯಲ್ಲಿ ಕಂಡ ಶಕ್ತಿ ಮುಂದುವರಿಯುತ್ತದೆ ಎಂದರು.
ಜಾತಿ ಗಣತಿ ಕುರಿತಾಗಿ ಸಚಿವ ಕೃಷ್ಣ ಭೈರೇಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎನ್ನುವುದು ಕಾಂಗ್ರೆಸ್ನ ತಪ್ಪು ಪ್ರಚಾರ. ಗಣತಿ ಕಾನೂನಾತ್ಮಕವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯದ್ದು, ರಾಜ್ಯ ಸರ್ಕಾರಕ್ಕೆ ಅದಕ್ಕೇನೂ ಅಧಿಕಾರ ಇಲ್ಲ. ಕೋರ್ಟ್ ಆದೇಶ ಪ್ರಕಾರ ಸಮೀಕ್ಷೆ ಕಡ್ಡಾಯವಲ್ಲ. ಕಾಂಗ್ರೆಸ್ ದುರುದ್ದೇಶದಿಂದ ನಡೆಸುತ್ತಿದ್ದರೆ, ನಾವು ಸದುದ್ದೇಶದಿಂದ ಭಾಗವಹಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಸಮಾಜಮುಖಿ ಪಕ್ಷವಲ್ಲ, ಅವರಿಗೆ ಸಮಾಜದ ಹಿತಕ್ಕಿಂತ ಅಧಿಕಾರ ಮುಖ್ಯ. ರಸ್ತೆ ಗುಂಡಿ ಮುಚ್ಚಲು 750 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರೂ, ಅದರ ಸ್ಪಷ್ಟ ವಿವರ ನೀಡಿಲ್ಲ. ತೆರಿಗೆ ವಸೂಲಿ ಹೆಚ್ಚಾದರೂ ಬೆಂಗಳೂರಿಗೆ ಯಾವುದೇ ಸ್ಪಷ್ಟ ಕೊಡುಗೆ ನೀಡಿಲ್ಲ ಎಂದು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ಬೆಳಗಾವಿಯ ಐ ಲವ್ ಮಹಮದ್ ವೇಳೆ ನಡೆದ ಕಲ್ಲುತೂರಾಟ ಕುರಿತು ಮಾತನಾಡಿದ ಅವರು, ಇದು ಶಾಂತಿ ಕದಡುವ ಪ್ರಯತ್ನ. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ ಮತ್ತು ಕುಮ್ಮಕ್ಕು ನೀಡುತ್ತಿರುವಂತಿದೆ. ಅಮಾಯಕರು ಬಲಿಯಾಗಬಾರದು, ಗೃಹ ಸಚಿವರು ಎಚ್ಚರದಿಂದಿದ್ದು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ