ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆ ಹಾಗೂ ಮೃತದೇಹಗಳ ಗೌಪ್ಯ ಅಂತ್ಯಕ್ರಿಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ವಕೀಲರ ನಿಯೋಗ ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್ಐಟಿ ತಂಡ ರಚಿಸಬೇಕೆಂದು ಮನವಿ ಮಾಡಿತ್ತು. ವಕೀಲರ ಮನವಿಗೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಯಾರೋ ಹೇಳಿದರು ಎಂದು SIT ರಚನೆ ಮಾಡಲು ಆಗುವುದಿಲ್ಲ. ಕಾನೂನು ಪ್ರಕಾರವೇ ಎಲ್ಲವನ್ನೂ ಮಾಡುತ್ತೇವೆ. ಪೊಲೀಸ್ ಇಲಾಖೆ ವರದಿ ಆಧಾರದ ಮೇಲೆ, ಎಸ್ಐಟಿ ರಚನೆ ಮಾಡಬೇಕು ಅಂದ್ರೆ ಮಾಡೋಣ. ನಮಗೆ ಯಾರಿಂದಲೂ ಒತ್ತಡ ಬಂದಿಲ್ಲ. ಒತ್ತಡ ಹಾಕಿದ್ರೂ ಯಾರ ಮಾತನ್ನೂ ಕೇಳುವುದಿಲ್ಲ.
ಕಂಪ್ಲೇಂಟ್ ಕೊಟ್ಟವ ವ್ಯಕ್ತಿ 10 ವರ್ಷ ತಲೆಮರೆಸಿಕೊಂಡಿದ್ದ. ಅವನು 164 ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ತಾನೇ ಹೆಣಗಳನ್ನು ಹೂತು ಹಾಕಿದ್ದಾಗಿ ಹೇಳಿದ್ದಾನೆ. ಆ ಹೆಣಗಳನ್ನು ತೋರಿಸುತ್ತೀನಿ ಅಂತಲೂ ಹೇಳಿದ್ದಾನೆ. ಪೊಲೀಸರು ಏನ್ ಹೇಳ್ತಾರೋ ನೋಡೋಣ. ನಾಳೆ, ನಾಡಿದ್ದು ಈ ಬಗ್ಗೆ ಮಾಹಿತಿ ನೀಡಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಧರ್ಮಸ್ಥಳ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟಿದ್ದೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.