ಡಿಕೆ V/S ತೇಜಸ್ವಿ ಓಪನ್‌ ಚಾಲೆಂಜ್ : ಡಿಸಿಎಂಗೆ ತೇಜಸ್ವಿ ಸೂರ್ಯ ಸವಾಲ್

ಬೆಂಗಳೂರಲ್ಲಿ ಉದ್ದೇಶಿತ ಸುರಂಗ ಮಾರ್ಗ ರಸ್ತೆ ವಿಚಾರ ರಾಜ್ಯ ರಾಜಕೀಯದ ಚರ್ಚಾ ವಿಷಯವಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಆಡಳಿತರೂಢ ಕಾಂಗ್ರೆಸ್ ನಡುವಣ ವಾಕ್ಸಮರ ಜೋರಾಗುತ್ತಿದೆ. ಸುರಂಗ ಮಾರ್ಗ ರಸ್ತೆಯಿಂದ ಬೆಂಗಳೂರಿಗೆ ಏನೂ ಉಪಯೋಗವಿಲ್ಲ. ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕೂಡಿದೆ ಎಂದು ಎರಡು ದಿನಗಳ ಹಿಂದಷ್ಟೇ ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಅಲ್ಲದೆ, ತೇಜಸ್ವಿ ಸೂರ್ಯ ಅವರು ಯೋಜನೆ ಹೇಗೆ ಸಾಧಕವಲ್ಲ ಎಂಬುದನ್ನು ವಿವರವಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಬೆಂಗಳೂರು ಸುರಂಗ ರಸ್ತೆ ಯೋಜನೆಯಿಂದ ಏನೂ ಉಪಯೋಗವಿಲ್ಲ. ಕೇವಲ ಶ್ರೀಮಂತರಿಗಾಗಿ ಮಾಡುವ ಆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಒಂದಷ್ಟು ಅಂಕಿಅಂಶಗಳು ಹಾಗೂ ದಾಖಲೆಗಳನ್ನೂ ಪ್ರಸ್ತುತ ಪಡಿಸಿದ್ದರು.

ಇದರಿಂದ ಕೆರಳಿದ್ದ ಕರ್ನಾಟಕ ಕಾಂಗ್ರೆಸ್, ಯೋಜನೆ ಸಂಬಂಧಿತ ಪ್ರಮುಖ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ. ಆದರೆ, ಬ್ರಾಂಡ್ ಬೆಂಗಳೂರಿನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದಿತ್ತು. Xನಲ್ಲಿ ಸರಣಿ ಪೋಸ್ಟ್‌ ಪ್ರಕಟಿಸುವ ಮೂಲಕ ಕಾಂಗ್ರೆಸ್ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಸುರಂಗ ರಸ್ತೆ ಯೋಜನೆಯ ನೇತೃತ್ವ ವಹಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ ಎಂದು ಸವಾಲ್‌ ಹಾಕಿದ್ದಾರೆ.

ಸುರಂಗ ರಸ್ತೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ ಮತ್ತು ಸಾರ್ವಜನಿಕ ಚರ್ಚೆಗೆ ಕಾಂಗ್ರೆಸ್ ಸರ್ಕಾರ ನಿಜಕ್ಕೂ ಮುಕ್ತರಾಗಿದ್ದರೆ, ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಪ್ರಸ್ತಾಪಿಸುತ್ತಿದ್ದೇನೆ. ಸಮಯ ಮತ್ತು ಸ್ಥಳವನ್ನು ನೀವೇ ನಿಗದಿ ಮಾಡಿ. ಒಳಿತು ಕೆಡುಕುಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author