ದಳಪತಿಗಳ ಬಲ ಕುಗ್ಗಿಸಲು ಡಿಕೆಶಿ ಮಾಸ್ಟರ್ ಪ್ಲಾನ್!

ರಾಜ್ಯ ರಾಜಕೀಯದಲ್ಲಿ ಮತ್ತೆ ಕದನವಾಡಿಸಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೊಸ ಮಾಸ್ಟರ್ ಪ್ಲಾನ್ ರೂಪಿಸಿರುವ ಮಾಹಿತಿ ಬಹಿರಂಗವಾಗಿದೆ. ಜೆಡಿಎಸ್‌ನ ಬಲ ಕುಗ್ಗಿಸುವ ಉದ್ದೇಶದಿಂದ ಅವರು ಕೆಲವು ಶಾಸಕರನ್ನು ಸೆಳೆಯಲು ಕಮಲ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಲ ಕುಗ್ಗಿಸಿಕೊಂಡಿರುವ ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಉಸಿರಾಡುತ್ತಿದ್ದರೆ, ಡಿಕೆಶಿಯ ಈ ತಂತ್ರ ದಳಪತಿಗಳಿಗೆ ಹೊಸ ತಲೆನೋವು ತಂದಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳಿಗಷ್ಟೇ ಸೀಮಿತವಾಗಿತ್ತು. ನಂತರ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತ ಪರಿಣಾಮವಾಗಿ, ದಳದ ಬಲ 18ಕ್ಕೆ ಇಳಿಯಿತು. ಆ ಸೋಲಿನ ಹಿಂದಿನ ಪ್ಲಾನರ್ ಡಿಕೆಶಿಯೇ ಎಂದು ಅಂದು ಹೇಳಲಾಗಿತ್ತು. ಇದೀಗ ಅದೇ ಡಿಕೆಶಿ ಮತ್ತೆ ಜೆಡಿಎಸ್‌ನ ಹೃದಯ ಭಾಗದಲ್ಲೇ ರಾಜಕೀಯ ಅಸ್ಥಿರತೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಇರುವುದಾದರೂ, ದಳದೊಳಗಿನ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಟಿ ದೇವೇಗೌಡ, ಅವರ ಪುತ್ರ ಹರೀಶ್‌ ಹಾಗೂ ಶಾಸಕಿ ಕರೆಮ್ಮ ಸೇರಿದಂತೆ ಕೆಲವರು ಪಕ್ಷದ ನಿಲುವಿನಿಂದ ಅಸಮಾಧಾನಗೊಂಡಿದ್ದಾರೆ. ಈ ಒಳ ಅಸಮಾಧಾನವೇ ಡಿಕೆಶಿಗೆ ಚಾನ್ಸ್‌ ನೀಡಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು ಅವರು ಹಿಂಬದಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ವಿವಿಧ ಶಾಸಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿರುವ ಮಾಹಿತಿ ಇದೆ. ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡಿರುವವರಿಗೆ ಭವಿಷ್ಯದ ರಾಜಕೀಯ ಭರವಸೆ ನೀಡಿ ಡಿಕೆಶಿ ಸದ್ದಿಲ್ಲದ ಶಿಫ್ಟ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 2028ರ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಗುರಿಯೊಂದಿಗೆ ಡಿಕೆಶಿ ಜೆಡಿಎಸ್‌ನ ಬಲ ಕುಗ್ಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಅವರ ತಂತ್ರ ಯಶಸ್ವಿಯಾದರೆ , ಮುಂದಿನ ಚುನಾವಣೆಗೆ ಮುನ್ನವೇ ಜೆಡಿಎಸ್‌ನ ಪ್ರಮುಖ ಮುಖಗಳು ಕಾಂಗ್ರೆಸ್ ಶಿಬಿರ ಸೇರುವ ಸಾಧ್ಯತೆ ಗಟ್ಟಿಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author