www.karnatakatv.net:- ರಾಷ್ಟ್ರೀಯ- ಹೆಚ್ಚಿನ ಭದ್ರತೆ ಇರುವ ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ನಿನ್ನೆ ಸಂಭವಿಸಿದ ಅವಳಿ ಸ್ಫೋಟಗಳು, ಉಗ್ರರ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ ಬಾಗ್ ಸಿಂಗ್ ಹೇಳಿದ್ದಾರೆ. ಸ್ಫೋಟಕಗಳನ್ನ ಹೊತ್ತು ಬಂದ ಡ್ರೋನ್ ಗಳು ಬೆಳಗಿನ ಜಾವ 1:40ಕ್ಕೆ ಜಮ್ಮು ವಿಮಾನ ನಿಲ್ದಾಣದ ಭಾರತೀಯ ವಾಯುಪಡೆಯ ವಾಯುನೆಲೆಗೆ ಅಪ್ಪಳಿಸಿವೆ. ಸ್ಫೋಟದಲ್ಲಿ ವಾಯುಪಡೆಯ ಇಬ್ಬರು ಗಾಯಗೊಂಡಿದ್ದಾರೆ. 6 ನಿಮಿಷಗಳ ಅಂತರದಲ್ಲಿ ಸ್ಫೋಟಗಳು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸತ್ವಾರಿ ಪ್ರದೇಶದಲ್ಲಿರುವ ಭಾರತೀಯ ವಾಯುಪಡೆಯ ಸರಹದ್ದಿನ ತಾಂತ್ರಿಕ ವಲಯದಲ್ಲಿ ಸಂಭವಿಸಿದ ಮೊದಲ ಸ್ಫೋಟದಿಂದ ಕಟ್ಟಡವೊಂದರ ಮೇಲ್ಛಾವಣಿಗೆ ಹಾನಿಯಾಗಿದೆ. 2ನೇ ಸ್ಫೋಟವು ನೆಲದ ಮೇಲೆ ಆಗಿದೆ ಎಂದಿದ್ದಾರೆ. ಪೊಲೀಸರು, ಭಾರತೀಯ ವಾಯುಪಡೆ ಹಾಗೂ ಇತರೆ ಭದ್ರತಾ ಸಂಸ್ಥೆಗಳು ದಾಳಿಯ ಕುರಿತು ತನಿಖೆ ಕೈಗೊಂಡಿವೆ ಎಂದು ದಿಲ್ ಬಾಗ್ ತಿಳಿಸಿದ್ದಾರೆ. ಇನ್ನು, ಅವಳಿಸ್ಫೋಟಗಳಿಗೆ ಸಂಬಂಧಿಸಿ ರಕ್ಷಾಣ ಸಚಿವ ರಾಜ್ ನಾಥ್ ಸಿಂಗ್ ಅವರು ವಾಯುಪಡೆ ಉಪಮುಖ್ಯಸ್ಥ ಏರ್ ಮಾರ್ಷಲ್ ಎಚ್.ಎಸ್.ಆರೋರಾ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.