ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ನಜರ್ಬಾದ್ ಠಾಣೆಯ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟದ ಜಾಲ ಪತ್ತೆಯಾಗಿದೆ.
ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕಿರಾಣಿ ಅಂಗಡಿ ಮಾಲೀಕ ಸೋಯಲ್ ಜೈನ್ ಸೆರೆ ಸಿಕ್ಕಿದ್ದು, ಬಬೀಲ್ ಎಂಬಾತ ಪರಾರಿಯಾಗಿದ್ದಾನೆ. ಸೋಯಲ್ ಕೇರಳದಿಂದ ಮಾದಕ ವಸ್ತು ತರಿಸಿಕೊಂಡು, ಅಂಗಡಿಯಲ್ಲಿದ್ದ ಅಕ್ಟೇರಿಯಂನಲ್ಲಿ ಮಾದಕ ವಸ್ತುವನ್ನು ಅಡಗಿಸಿಟ್ಟುಕೊಂಡಿದ್ದ. ದಾಳಿಯ ವೇಳೆ 65 ಗ್ರಾಂ ತೂಕದ ಎಂಡಿಎಂಎ
ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಉದಯಗಿರಿ, ಎನ್.ಆರ್. ಮೊಹಲ್ಲಾದಲ್ಲಿ ಕಾರು, ಬೈಕ್ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕರನ್ನು ತಡೆದು ತಪಾಸಣೆ ನಡೆಸಿದರು. 860 ಗ್ರಾಂ ಗಾಂಜಾ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದರು.
140 ಯುವಕರನ್ನು ತಪಾಸಣೆ ನಡೆಸಿ, 12 ಪ್ರಕರಣ ದಾಖಲಿಸಲಾಗಿದೆ. ಅನುಮಾನ ಬಂದ 10 ಮಂದಿಯನ್ನು ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ