Elephant Attack
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣಕ್ಕೆ ಸ್ಥಳೀಯರು ರೊಚ್ಚಿಗೆದ್ದಿದ್ದರು. ಅಲ್ಲದೇ ಸ್ಥಳದಲ್ಲಿ ಪ್ರತಿಭಟನೆಯೂ ನಡೆದಿತ್ತು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸರ್ಕಾರ ರಾತ್ರೋರಾತ್ರಿ ಪ್ರತಿಭಟನಾಕಾರರ ಮನವೊಲಿಸಲು ಸಿಎಂ ಉಸ್ತುವಾರಿ ಸಚಿವರನ್ನ ಕಳುಹಿಸಿದ್ದಾರೆ.
ರಾತ್ರಿ 11.50 ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮನವಿ ಮಾಡಿದರು. ಫೋನ್ ನಲ್ಲಿ ಧರಣಿನಿರತರ ಜೊತೆ ಸಿಎಂ, ಮತ್ತು ಸಚಿವ ಅಶೋಕ್ ಚರ್ಚೆ ನಡೆಸಿ ಸಭೆ ಮೂಲಕ ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ರು. ನವೆಂಬರ್ 3ರಂದು ಕಾಡಾನೆ ಹಾವಳಿ ಸಂಬಂಧ ಸಕಲೇಶಪುರದಲ್ಲಿ ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಾಡಾನೆ ದಾಳಿಗೆ ಗ್ರಾಮದ ಮನು ಎಂಬುವವರು ಮೃತಪ್ಟಟಿದ್ದಾರು. ಘಟನೆ ನಡೆದ ಬಳಿಕ ಹಾಸನಕ್ಕೆ ಭೇಟಿ ನೀಡಿದ್ರೂ ಸ್ಥಳಕ್ಕೆ ಉಸ್ತುವಾರಿ ಸಚಿವ ತೆರಳಿರಲಿಲ್ಲ. ಸ್ಥಳಕ್ಕೆ ಸಚಿವರು ಬರುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಪ್ರತಿಭಟನಾಕಾರರಿಗೆ ಮಣಿದು ಸಚಿವರನ್ನು ಸಿಎಂ ಕಳಿಸಿದ್ದರು.
15 ಲಕ್ಷದ ಪರಿಹಾರದ ಜೊತೆಯಲ್ಲೇ ಕುಟುಂಬದ ಹೆಣ್ಣುಮಗಳಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ. ಎಲ್ಲ ಅಂತಿಮ ಕಾರ್ಯಗಳು ಮುಗಿದ ತಕ್ಷಣವೇ ಸಕಲೇಶಪುರದಲ್ಲಿ ಉದ್ಯೋಗದ ಕುರಿತು ಡಿಸಿ, ಎಸ್ಪಿ, ಸಿಇಓ ಅವರಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಎರಡು-ಮೂರುದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಎಲ್ಲವನ್ನೂ ಹಂತಹಂತವಾಗಿ ಬಗೆಹರಿಸುವುದಾಗಿ ತಿಳಿಸಿದರು.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸಮೀಪದ ಕುಟುಂಬ ಸದಸ್ಯರ ಜೊತೆಗೆ ಚಾಮುಂಡಿದೇವಿಯ ಪೂಜೆಗೆಂದು ಹೊರಟಿದ್ದ ಕಾಫಿ ಬೆಳೆಗಾರರನ್ನು ಅಡ್ಡಗಟ್ಟಿದ ಕಾಡಾನೆ ತುಳಿದು ಕೊಂದಿತ್ತು. ಘಟನೆ ಬಳಿಕ ಸ್ಥಳಕ್ಕೆ ಯಾರೂ ಬರದ ಹಿನ್ನೆಲೆ ರೊಚ್ಚಿಗೆದ್ದ ಜನರು ಮೃತದೇಹ ಇಟ್ಟುಕೊಂಡು ಅಹೋರಾತ್ರಿ ಪ್ರತಿಭಟಿಸಿದ್ದರು. ಜಿಲ್ಲೆಯಲ್ಲಿದ್ದರೂ ಉಸ್ತುವಾರಿ ಸಚಿವರು ಬಂದಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ಮುಂದುವರೆಸಿದ್ದರು.
ಇದೀಗ ಸಚಿವರ ಆಗಮನದ ಬಳಿಕ ಪರಿಸ್ಥಿತಿ ತಿಳಿಯಾಗಿದ್ದು, ಪರಿಹಾರದ ಮೊತ್ತ ಮತ್ತು ಸರ್ಕಾರಿ ಕೆಲಸದ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಆನೆ ದಾಳಿ ಹಾವಳಿಗೆ ಯಾವ ರೀತಿಯ ಶಾಶ್ವತಪರಿಹಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.