ಶಿವಮೊಗ್ಗ: ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇವತ್ತು ನಾನು ತೀರ್ಮಾನ ತೆಗೆದುಕೊಂಡಿದ್ದೇನೆ. ನಾಳೆ ದಿನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂಬುದಾಗಿ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನನಗೆ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ನಿರ್ದೋಷಿ ಎಂಬುದಾಗಿ ನಂಬಿಕೆ ಇದೆ. ನನ್ನ ಮನೆದೇವರು ನನ್ನ ಕೈಬಿಡೋದಿಲ್ಲ. ನಾನು ತಪ್ಪು ಮಾಡಿದ್ರೇ ಶಿಕ್ಷೆ ಕೊಡಲಿ ಎಂದರು.
ಸಂತೋಷ್ ಪ್ರಕರಣದಲ್ಲಿ ತನಿಖೆ ನಡೆಯಲಿ, ನಾನು ಪ್ರಕರಣದಲ್ಲಿ ಸಂಪೂರ್ಣವಾಗಿ ನಿರ್ದೋಷಿಯಾಗಿ ಹೊರ ಬರಲಿದ್ದೇನೆ. ನಾಳೆ ಸಂಜೆ ಸಿಎಂ ಭೇಟಿಯಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.




