ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಹಾವೇರಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿಗೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಪರಿಶಿಷ್ಟ ಪಂಗಡದ ಸಮುದಾಯದವರು ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಅವಧಿ ವಿಸ್ತರಿಸಲಾಗಿದೆ.

ನೇರ ಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸರಕು ಸಾಗಾಣಿಕೆ ವಾಹನ, ಮೈಕ್ರೋ ಕ್ರೆಡಿಟ್ ಯೋಜನೆ, ಭೂ ಒಡೆತನ ಹಾಗೂ ಗಂಗಾ ಕಲ್ಯಾಣ ಯೋಜನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ವಾಹನವಾಗಿದ್ದಲ್ಲಿ ಡ್ರೈವಿಂಗ್ ಲೈಸನ್ಸ್, ಗಂಗಾ ಕಲ್ಯಾಣ ಯೋಜನೆಗೆ ಜಮೀನಿನ ಪಹಣಿ ಮತ್ತು ಸಣ್ಣ , ಅತೀ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರಗಳೊಂದಿಗೆ ದಿನಾಂಕ 31-08-2022ರೊಳಗಾಗಿ https://suvidha.karnataka.gov.inಮೂಲಕ ಅರ್ಜಿ ಸಲ್ಲಿಸಬೇಕು.

ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನುಸಹ ಸುವಿಧಾ ಪೋರ್ಟ್ ಮೂಲಕವೇ ಸಲ್ಲಿಸಬೇಕು. ನಿಗಧಿತ ದಿನಾಂಕ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ https://kmvstdcl.karnataka.gov.in, ನಿಗಮದ ಜಿಲ್ಲಾ ಕಚೇರಿ, ದೂ.08375-234408 ಹಾಗೂ ಕಲ್ಯಾಣ ಮಿತ್ರ ಸಹಾಯವಾಣಿ 9482300400 ಸಂಪರ್ಕಿಸಲು ಕೋರಲಾಗಿದೆ.

About The Author