ಬೆಂಗಳೂರು : ರಿಯಲ್ ಎಸ್ಟೇಟ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಇದೀಗ ಖ್ಯಾತ ನಟ ಹಾಗೂ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ವಿವಾದಗಳಿಂದ ದೂರ ಉಳಿದಿದ್ದ ಮಹೇಶ್ ಬಾಬು ಅವರಿಗೆ ಈಗ ಟೆನ್ಷನ್ ಶುರುವಾಗಿದೆ.
ಮುಂಬರುವ ಏಪ್ರಿಲ್ 28ರಂದು ಬೆಳಿಗ್ಗೆ ವಿಚಾರಣೆಗೆ ಬರುವಂತೆ ಸಮನ್ಸ್ನಲ್ಲಿ ತಿಳಿಸಲಾಗಿದೆ. ಮಹೇಶ್ ಬಾಬು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು, ಅದು ಸುರಾನ ಗ್ರೂಪ್ ಹಾಗೂ ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಮಹೇಶ್ ಬಾಬು ಅವರಿಗೆ ನೋಟಿಸ್ ನೀಡಲಾಗಿದೆ. ಈ ಜಾಹೀರಾತು ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 5.9 ಕೋಟಿ ರೂಪಾಯಿ ಹಣದ ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಕುರಿತು ಮಾಹಿತಿ ಪಡೆಯಲು ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಟಿಸ್ ಕೊಟ್ಟ ಮಾತ್ರಕ್ಕೆ ಅವರನ್ನು ಅಪರಾಧಿಗಳು ಎಂದು ಹೇಳಲಾಗುವುದಿಲ್ಲ, ಅವರು ಈ ಪ್ರಕರಣದಲ್ಲಿ ಇಲ್ಲದೆ ಇರಬಹುದು ಆದರೆ ವಂಚಕ ಕಂಪನಿಯೊಂದಿಗೆ ಅರಿವಿಗೆ ಬಾರದೆ ವ್ಯವಹಾರ ನಡೆಸಿರಬಹುದು. ಹೀಗಾಗಿ ಈ ಎಲ್ಲದರ ವಿಚಾರಣೆಗಾಗಿ ಅವರನ್ನು ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
5.9 ಕೋಟಿ ರೂಪಾಯಿಯ ವ್ಯವಹಾರ..?
ಈ ನೋಟಿಸ್ ನೀಡಿರುವುದು ಸ್ವಾಭಾವಿಕವಾಗಿಯೇ ಆಗಿದೆ. ಪ್ರಮುಖವಾಗಿ ಕಳೆದ ಏಪ್ರಿಲ್ 16ರಂದು ಹೈದ್ರಾಬಾದ್ನಲ್ಲಿಇಡಿ ದಾಳಿ ಮಾಡಿ ಶೋಧ ನಡೆಸಿತ್ತು. ಇಲ್ಲಿನ ವೆಂಗಲ್ ರಾವ್ ನಗರದಲ್ಲಿರುವ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಗ್ರೂಪ್ ಮತ್ತು ಇತರ ಕೆಲವು ಕಂಪನಿಗಳಿಗೆ ಇಡಿ ಶಾಕ್ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿಯು ಏಪ್ರಿಲ್ 16 ರಂದು ಸಿಕಂದರಾಬಾದ್, ಜುಬಿಲಿ ಹಿಲ್ಸ್ ಮತ್ತು ಬೋವೆನ್ಪಲ್ಲಿಯಲ್ಲಿ ಶೋಧ ನಡೆಸಿತ್ತು. ಈ ವೇಳೆ ಮಹೇಶ್ ಬಾಬು ಅವರ ವ್ಯವಹಾರದ ವಿಚಾರ ಬಯಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಸ್ಥೆಯ ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 5.9 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಪೈಕಿ ಚೆಕ್ ಮೂಲಕ 3.4 ಕೋಟಿ ರೂಪಾಯಿಗಳು ಮತ್ತು ನಗದು ಮೂಲಕ 2.5 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗ, ನಗದು ಪಾವತಿಯ ಕುರಿತು ಇಡಿ ಹೆಚ್ಚಿನ ಪರಿಶೀಲನೆ ನಡೆಸುತ್ತಿದೆ.
ಖರೀದಿದಾರರಿಗೆ ವಂಚಿಸಿದ್ದ ಕಂಪನಿ..!
ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಸಂಸ್ಥೆಗಳ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, ತೆಲಂಗಾಣ ಪೊಲೀಸರು ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್ನ ನರೇಂದ್ರ ಸುರಾನ ಮತ್ತು ಸಾಯಿ ಸೂರ್ಯ ಡೆವಲಪರ್ಸ್ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಹಲವು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಈ ಇಬ್ಬರು ಅನಧಿಕೃತ ಲೇಔಟ್ಗಳಲ್ಲಿ ಪ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ, ಒಂದೇ ಪ್ಲಾಟ್ಗಳನ್ನು ಹಲವು ಬಾರಿ ಮರುಮಾರಾಟ ಮಾಡುವ ಮೂಲಕ ಮತ್ತು ನೋಂದಣಿಗಳ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ. ನಟ ಮಹೇಶ್ ಬಾಬು ಪಾತ್ರದ ಕುರಿತು ಅವರ ವಿಚಾರಣೆಯಿಂದಲೇ ಇನ್ನಷ್ಟು ಮಾಹಿತಿ ತಿಳಿಯಲಿದೆ.