ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸ್ಥಳೀಯ ಕೆರೆಗಳು ತುಂಬಿ ಹರಿಯುತ್ತಿವೆ. ಭಾನುವಾರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕೋಡಿ ನೀರು ಹರಿಯುವ ಘಟನೆ ಕಂಡುಬಂದಿದೆ.
ಕಾಲುವೆಗಳು ಮುಚ್ಚಿಕೊಂಡಿದ್ದ ಕಾರಣ ಕೆರೆ ಕೋಡಿ ನೇರವಾಗಿ ರಸ್ತೆ ಮತ್ತು ಪೊಲೀಸ್ ಠಾಣೆ ಪಾದಚಾರಿ ಮಾರ್ಗದ ಕಡೆ ಹರಿದಿದೆ. ಈ ವೇಳೆ ನೀರಿನ ಅಬ್ಬರದ ನಡುವೆ ಹಲವಾರು ಮೀನುಗಳು ತೇಲಿಕೊಂಡು ಬಂದಿದ್ದಾವೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನೀರಿನೊಳಗೆ ನಿಂತು ಬರಿ ಕೈಗಳಿಂದಲೇ ಮೀನುಗಳನ್ನು ಹಿಡಿಯುವ ದೃಶ್ಯಗಳು ಕಾಣಿಸಿಕೊಂಡವು. ಕೆಲವರು ಪ್ಲಾಸ್ಟಿಕ್ ಕವರ್ ಮತ್ತು ಡಬ್ಬಿಗಳಲ್ಲಿ ಮೀನುಗಳನ್ನು ಸಂಗ್ರಹಿಸಿದರು.
ಮುಳಬಾಗಿಲು ತಾಲ್ಲೂಕಿನ ಊರುಕುಂಟೆ, ಮಿಟ್ಟೂರು, ಹೊಸಕೆರೆ, ಸಿದ್ಧಘಟ್ಟ ಮತ್ತು ಸೋಮೇಶ್ವರಪಾಳ್ಯ ಸೇರಿದಂತೆ ಅನೇಕ ಕೆರೆಗಳು ಕೂಡ ಮಳೆಯಿಂದ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ರಸ್ತೆಗಳು ನೀರಿನ ಅಬ್ಬರದಿಂದ ಬಳಲುತ್ತಿವೆ.
ಗ್ರಾಮಸ್ಥರು ಮಳೆ ತೀವ್ರತೆ ಹೆಚ್ಚಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತವು ನೀರು ಹರಿದು ಹೋಗುವ ಮಾರ್ಗಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ವರದಿ : ಲಾವಣ್ಯ ಅನಿಗೋಳ