ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಆರೋಪಗಳಿಗೆ, ಇದುವರೆಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಬೇರೆ ದಾರಿಯಲ್ಲಿ ತನಿಖೆ ಮಾಡಲು ಮುಂದಾಗಿದ್ದಾರೆ. ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು, ಸಂಚು ರೂಪಿಸಲಾಗಿದೆಯೇ ಎಂಬುದರತ್ತ ತನಿಖೆ ನಡೆಸುತ್ತಿದ್ದಾರೆ.
ದೂರುದಾರ ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ? ಇಂತಹ ಗಂಭೀರ ಆರೋಪಗಳನ್ನು ಮಾಡಲು ಪ್ರಚೋದಿಸಿದವರು ಯಾರು? ಎಂಬಿತ್ಯಾದಿ ಮಾಹಿತಿ ತಿಳಿಯಲು ನಾಲ್ಕೈದು ಮಂದಿಗೆ ನೋಟಿಸ್ ನೀಡಲಾಗಿತ್ತು. ಇಂದು ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್ ವಿಚಾರಣೆಗೆ ಹಾಜರಾಗಬೇಕಿದೆ.
1995ರಿಂದ 2014ರವರೆಗೆ ದೇವಸ್ಥಾನದಲ್ಲಿ ಸ್ವಚ್ಛಾ ಕೆಲಸಗಾರನಾಗಿದ್ದ ಚಿನ್ನಯ್ಯ, 2002ಮತ್ತು 2014ರ ನಡುವೆ 200ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತ್ತಿಟ್ಟಿರುವುದಾಗಿ ಆರೋಪಿಸಿ, 2025ರ ಆಗಸ್ಟ್ನಲ್ಲಿ ದೂರು ದಾಖಲಿಸಿದ್ರು.
ಅಪಘಾತ, ಕೊಲೆ ಮತ್ತು ಅನುಮಾಸ್ಪಾದವಾಗಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿಯಿಲ್ಲದೆ ಹೂತು ಹಾಕಲಾಗಿದೆ ಎಂದು ದೂರಿನಲ್ಲಿ ಹೇಳಿದ್ರು. ಬಳಿಕ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದ ಚಿನ್ನಯ್ಯ, ತಾನು ಈ ಹಿಂದೆ ನೀಡಿದ್ದ ಹೇಳಿಕೆ ಹಾಗೂ ಸಾಕ್ಷ್ಯ ಸುಳ್ಳು ಆಗಿದ್ದು, ಕೆಲವರ ಆಜ್ಞೆಯಿಂದ ಆ ರೀತಿ ಮಾಡಿರುವುದಾಗಿ ಹೇಳಿದ್ದರು.

