ಬೆಂಗಳೂರು: ಮುಸ್ಲಿಮರಿಗೆ ಹಿಂದೂಗಳು ಮಾವು ಮಾಡಬಾರದು ಅಥವಾ ಖರೀದಿ ಮಾಡಬಾರದು ಎಂದು ಹೊಸದಾಗಿ ಹಿಂದೂಪರ ಸಂಘಟನೆಗಳು ಸೃಷ್ಟಿಸಿರುವ ವಿವಾದದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಮುಸಲ್ಮಾನರ ಬಳಿ ಮಾವಿನ ಹಣ್ಣು ಖರೀದಿ ಮಾಡಬೇಡಿ ಅಂದರೆ ಅದಕ್ಕಿಂತ ರಾಷ್ಟ್ರ ದ್ರೋಹ ಬೇರಿಲ್ಲ. ಹೀಗೆ ಮುಂದುವರೆದರೆ ಜನರು ಶೀಘ್ರ ಬಿಜೆಪಿ ವಿರುದ್ದ ತಿರುಗಿಬೀಳುತ್ತಾರೆ ಎಂದರು.
ಇದೆಲ್ಲ ಹೇಗಿದೆ ಎಂದರೆ, ಕಳ್ಳಕಾಕರು ಬರುತ್ತಿದ್ದಾರೆ, ಅವರನ್ನು ಓಡಿಸ್ತಾ ಇರಿ ಎಂದು ಹೇಳಿದ ಹಾಗೆ ಆಯಿತು. ಇದಕ್ಕೆಲ್ಲ ಒಂದು ಅಂತ್ಯ ಇದ್ದೇ ಇರುತ್ತದೆ. ಹಿಂದುಗಳೇ ಜನರೇ ತಿರುಗಿಬೀಳುತ್ತಾರೆ, ನೋಡುತ್ತೀರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮುಸ್ಲಿಮರು ಮಾವಿನ ಹಣ್ಣಿನ ಮೇಲೆ ಕೆಮಿಕಲ್ ಹಾಕಿ ಮಾರುತ್ತಾರೆ ಎಂಬ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ನೂರಾರು ವರ್ಷದಿಂದ ಅವರೇ ಮರಿದ ಹಣ್ಣುಗಳನ್ನು, ಇತರೆ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಬಂದಿದ್ದೇವೆ. ಇಂತಹ ವಿಚಾರವೆಲ್ಲ ಚುನಾವಣೆ ವೇಳೆಯಲ್ಲಿ ಯಾಕೆ ಬಂತು? ಕೇವಲ ಮತ ಗಳಿಕೆಗಾಗಿ ಇವೆಲ್ಲ ನಡೆಯುತ್ತಿವೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಮುಸ್ಲಿಮರಿಂದ ಮಾವಿನ ಖರೀದಿ ಮಾಡಬೇಡಿ, ಅವರಿಗೆ ರೈತರು ಹಣ್ಣು ಮಾರಬಾರದು ಎನ್ನುವುದು ಬಿಜೆಪಿಗೆ ತಿರುಗು ಬಾಣ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.




