“ಶಾಸಕರೇ ನೀವೆ ಕನ್ಯೆ ನೋಡಿ ಮದುವೆ ಮಾಡಿಸಿ” ಯುವಕರಿಂದ ಎಂಎಲ್ ಎ ಗೆ ಡಿಮ್ಯಾಂಡ್

ಗದಗ: ಮಕ್ಕಳು ವಯಸ್ಸಿಗೆ ಬಂದರೇ ಸಾಕು ಮನೆಯಲ್ಲಿ ತಂದೆ ತಾಯಿಗಳಿಗೆ ಮಕ್ಕಳ ಮದುವೆಯದೇ ಚಿಂತೆ. ಆದರೆ ಆ ಊರಿನ ಯುವಕರು ನೋಡೋಕೆ ಏನೋ ಸುಂದರವಾಗಿದ್ದಾರೆ. ದಷ್ಟಪುಷ್ಟವಾಗಿ‌ ಕೂಡ ಇದ್ದಾರೆ. ಶ್ರೀಮಂತರೂ ಬೇರೆ ಅಲ್ಲದೇ ಜಮೀನು, ನೌಕರಿ ಎಲ್ಲವೂ ಇದೆ. ಆದರೆ ಈ ಊರಿನಲ್ಲಿ ಸರಿ ಸುಮಾರು 100 ಕ್ಕೂ ಹೆಚ್ಚು ಜನ ಯುವಕರಿಗೆ ಮದುವೆನೇ ಆಗಿಲ್ಲ. ಬಹುತೇಕರು ನಾಲ್ವತ್ತರ ಆಸುಪಾಸಿನಲ್ಲಿದ್ದರೂ ರಾಹುಲ್ ಗಾಂಧಿ, ಸಲ್ಮಾನ್ ಖಾನ್ ರೀತಿ ಇನ್ನೂ ಕುಮಾರರಾಗಿಯೇ ಇದ್ದಾರೆ. ಅರೇ ಮದುವೆ ವಯಸ್ಸಿಗೆ ಬಂದವರು ಇನ್ನೂ ಯಾಕೆ ಮದುವೆಯಾಗಿಲ್ಲ ಈ ಅಂತ ಅನಿಸ್ತಿದೆಯಾ ಹಾಗಾದರೆ ಈ ಸ್ಟೋರಿ ಕಂಪ್ಲೀಟ್ ಓದಿ..

ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಮಲಪ್ರಭಾ ನದಿಯ ಸಂತ್ರಸ್ತರ ಗೋಳು. ಹೌದು.. ಈ ಗ್ರಾಮದಲ್ಲಿ ಸರಿ ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ. ಯಾಕ ಅಂದ್ರೆ ಇಲ್ಲಿನ ಯುವಕರಿಗೆ ಯಾರೂ ಕನ್ಯೆ ಕೊಡ್ತಿಲ್ವಂತೆ. ಹೀಗಂತ ಇಲ್ಲಿನ ಯುಕವರೇ ಗೋಳಾಡ್ತಿದ್ದಾರೆ ನೋಡಿ… ಅಂದಹಾಗೆ ಈ ಗ್ರಾಮದ ಜನರಿಗೆ ವಾಸಿಸೋಕೆ ಯೋಗ್ಯವಾದ ಒಂದೇ ಒಂದು ಮನೆ ಇಲ್ಲ. ಮನೆ ಇಲ್ಲದ ಜನ ಇವರು. ಹೀಗಾಗಿ ಮನೆ ಇಲ್ಲ ಅಂದಮೇಲೆ ಯಾರು ತಾನೆ ಕನ್ಯ ಕೊಡ್ತಾರೆ ನೀವೆ ಹೇಳಿ.  ಇವರಿಗೆ ಮನೆ ಇಲ್ಲ ಮನೆ ಕಟ್ಟಿಸಿಕೊಳ್ಳಲು ಜಾಗವೂ ಇಲ್ಲ. ಇದರಿಂದ ಈ ಗ್ರಾಮದ ಜನರಿಗೆ ಅನ್ಯ ಗ್ರಾಮದವರು ಈ ಊರಿಗೆ ಕನ್ಯ ಕೊಡ್ತಿಲ್ಲ ಮತ್ತು ಕನ್ಯೆ ತೊಗೊಳ್ತಿಲ್ಲ ಹೀಗಾಗಿ ಈ ಗ್ರಾಮದ ಜನರಿಗೆ ದೊಡ್ಡ ತಲೆನೋವಾಗಿದೆ. ನಮ್ಮ ಮಕ್ಕಳಿಗೆ ಹೇಗಪ್ಪ ಮದುವೆ ಮಾಡೋದು ಅಂತ ಚಿಂತೆಗೀಡಾಗಿದ್ದಾರೆ. ಕೆಲವರು ತಮ್ಮ ಮಕ್ಕಳ ಮದುವೆ ಮಾಡೋಕೆ ಅಂತಾನೆ ಊರು ಬಿಟ್ಟು ಬೇರೆ ಊರಲ್ಲಿ ಹೋಗಿ ನೆಲೆಸಿದ್ದಾರೆ. ಹೀಗಾಗಿ ಈ ಭಾಗದ ಶಾಸಕರಾಗಿರುವ ಸಿ.ಸಿ.ಪಾಟೀಲರೇ ನಮಗೆ ಕನ್ಯೆ ನೋಡಿ ಮದುವೆ ಮಾಡಿಸಿ ಅಂತ ಒತ್ತಾಯ ಮಾಡ್ತಿದ್ದಾರೆ.

ಇಷ್ಟಕ್ಕೆಲ್ಲ ಕಾರಣ ಈ ಭಾಗದ ಶಾಸಕರು ಮತ್ತು ಅಧಿಕಾರಿಗಳೇ ಕಾರಣ ಅಂತ ಈ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಯಾಕಂದರೆ ಇವರು ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ 2009ರಲ್ಲಿಯೇ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರು. ಆ ಸಂದರ್ಭದಲ್ಲಿ ಸರಕಾರ ಸಂತ್ರಸ್ತರಿಗಾಗಿ ಕಟ್ಟಿಸಿದ್ದ ಸುಮಾರು 500 ಮನೆಗಳನ್ನು ಇನ್ನೂ ಹಂಚಿಕೆ ಮಾಡಿಲ್ಲ. ಪ್ರವಾಹ ಬಂದು ಇಡೀ ಊರು ಕೊಚ್ಚಿಹೋಗಿದೆ. ಹೀಗಾಗಿ ಊರನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಮನೆ ಕಟ್ಟಿಸಿ ಸರಿಸುಮಾರು 10 ವರ್ಷ ಕಳೆದಿವೆ ಆದರೂ ಸಹ ಇವರಿಗೆ ಮನೆ ಹಂಚಿಕೆ ಮಾಡಿಲ್ಲ. ಅವರಿಗೆ ಮನೆ ಹಕ್ಕುಪತ್ರ ವಿತರಣೆ ಮಾಡಿಲ್ಲ. ಇದಕ್ಕೆಲ್ಲ ಕಾರಣ ಅಧಿಕಾರಿಗಳು ಮತ್ತು ಶಾಸಕರ ಹುಸಿ ಭರವಸೆಗಳೇ ಕಾರಣ ಅಂತ ಹೇಳ್ತಿದ್ದಾರೆ. ಮನೆ ಹಂಚಿಕೆ ಮಾಡಿ ಮಾಡಿ ಅಂತ ಹೇಳಿ ಸುಸ್ತಾಗಿದ್ದಾರೆ. ಆದರೂ ಸಹ ಇದುವರೆಗೂ ಮನೆ ಹಂಚಿಕೆ ಮಾಡದಿದ್ದಕ್ಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಸ್ಯೆಯಿಂದ ಇಂದು ಗ್ರಾಮದಲ್ಲಿ ಯಾರೊಬ್ಬರಿಗೂ ಸ್ವಂತ ಸೂರಿಲ್ಲ. ಕೊನೆಪಕ್ಷ ತಾವಾದರೂ ಮನೆಕಟ್ಟಿಸಿಕೊಳ್ಳೋಣ ಅಂದರೆ ಅವರ ಹೆಸರಲ್ಲಿ ಜಾಗವಿಲ್ಲ. ಹೀಗಾಗಿ ತಮಗೆ ಇಷ್ಟ ಬಂದಲ್ಲಿ ತಗಡಿನ ಸೆಡ್​ಗಳನ್ನ ನಿರ್ಮಿಸಿಕೊಂಡು ಜೀವನ ದೂಡ್ತಿದ್ದಾರೆ. ಆದರೆ ಇದೇ ರೀತಿ ಬಯಲಿನಲ್ಲಿ ಎಷ್ಟು ಅಂತ ಜೀವನ ನಡೆಸೋದು ನೀವೇ ಹೇಳಿ. ಮದುವೆ ಮಾಡಿಕೊಳ್ಳೋದಕ್ಕೆ ಈಗ ಯುವಕರು ಪರದಾಡ್ತಿದ್ದಾರೆ.

ಇನ್ನೂ ಸರಕಾರ ಕಟ್ಟಿಸಿರೊ ಬಹುತೇಕ ಮನೆಗಳು ಬಿದ್ದು ಹೋಗಿವೆ. ಕೆಲವು ಮನೆಗಳಿಗೆ ಕಿಡಿಕಿ ಬಾಗಿಲುಗಳಿಲ್ಲ ಎಲ್ಲ ಕಿತ್ತುಹೋಗಿವೆ. ವಿದ್ಯುತ್ ವ್ಯವಸ್ಥೇ ಮೊದಲೇ ಇಲ್ಲ. ರಸ್ತೆಗಳಿಲ್ಲ. ಅಂತದ್ರಲ್ಲೇ ಜೀವನ ಸಾಗಿಸ್ತಿದ್ದಾರೆ. ಮಳೆ ಬಂದರೆ ಇಡೀ ರಸ್ತೆಗಳು ಕೆಸರಿನಿಂದ ತುಂಬಿಹೋಗ್ತವೆ. ಇದರಿಂದ ತಮ್ಮ ವಾಹನಗಳನ್ನ ರಸ್ತೆಗೆ ತಂದು ನಿಲ್ಲಿಸುತ್ತಾರಂತೆ. ಇನ್ನು ಸ್ನಾನ ಮಾಡೋಕೆ ಸೂಕ್ತ ಜಾಗ ಇಲ್ಲ ಮಹಿಳೆಯರೂ ಸಹ ಹೊರಗಡೆ ಸ್ನಾನ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಗ್ರಾಮಸ್ಥರು ಬಕಪಕ್ಷಿಯಂತೆ ಹತ್ತು ವರ್ಷಗಳಿಂದ ಮನೆಗಾಗಿ ಕಾಯ್ದು ಕಾಯ್ದು ಸೋತೋಗಿದ್ದಾರೆ. ಕಟ್ಟಿರೋ ಮನೆಯಲ್ಲ ಬಿದ್ದೋಗಿವೆ. ಕಿಡಿಕಿ ಬಾಗಿಲು ಅಂತೂ ಮೊದಲೇ ಇಲ್ಲ. ಮನೆತುಂಬ ಗಿಡಗಂಟಿ ಮುಳ್ಳುಗಳು ಬೆಳೆದುಬಿಟ್ಟಿವೆ. ಅದೇ ಮನೆ ಎದುರು ಶೆಡ್ ನಿರ್ಮಾಣ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಶಾಸಕರು ಅಧಿಕಾರಿಗಳು ಬರೀ ಆಶ್ವಾಸನೆ ಕೊಟ್ಟು ಯಾಮಾರಿಸ್ತಿದ್ದಾರೆ ಅನ್ನೋದೆ ದುರಂತ..

ಕರ್ನಾಟಕ ಟಿವಿ, ಗದಗ

About The Author