ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮುಂದುವರಿದಿದೆ. ವರದಿ ಮಾಡ್ತಿದ್ದ ಯೂಟ್ಯೂಬರ್, ಟಿವಿ ವರದಿಗಾರರ ಮೇಲೆ ಭೀಕರವಾಗಿ ಹಲ್ಲೆ ನಡೆದಿದೆ. ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ನಿನ್ನೆ ಸಂಜೆ ದೊಡ್ಡ ಹೈಡ್ರಾಮವೇ ನಡೀದಿದೆ.
ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆಂದು ಆರೋಪಿಸಿ, ನಾಲ್ವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ಗುಂಪುಗೂಡಿದ್ದ ಜನರನ್ನು ಚದುರಿಸಲು, ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದೇ ವೇಳೆ ಇನ್ನೊಂದು ಗುಂಪು, ಖಾಸಗಿ ಚಾನಲ್ನ ವರದಿಗಾರ ಮತ್ತು ಕ್ಯಾಮರಾಮ್ಯಾನ್ ಮೇಲೂ ಹಲ್ಲೆ ಮಾಡಿದ್ದಾರೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದ್ರು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಮಾತನಾಡಿದ್ದಾರೆ. ಎರಡು ಗುಂಪುಗಳ ನಡುವೆ ಜಗಳ ಆಗಿದೆ ಅಂತಾ ಹೇಳಿದ್ದಾರೆ. ಎರಡೂ ಗುಂಪುಗಳು ಕಂಪ್ಲೇಂಟ್ ಕೊಟ್ಟಿದ್ದಾರೆ. ಎರಡೂ ದೂರುಗಳನ್ನು ತೆಗೆದುಕೊಂಡು ತನಿಖೆ ಮಾಡಲಾಗ್ತಿದೆ. ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು, ಕೇಸ್ ರಿಜಿಸ್ಟರ್ ಮಾಡಬೇಕೆಂಬ ಬಗ್ಗೆ, ಸ್ಥಳೀಯ ಪೊಲೀಸರು, ಎಸ್ಐಟಿನವರು ನೋಡಿಕೊಳ್ತಾರೆ ಎಂದ್ರು.
ಇನ್ನು, ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ, ಸರಿಯಾದ ಸುದ್ದಿ ನೀಡ್ತಿದ್ದಾರೆ ಅನ್ನೋ ತೀರ್ಮಾನವನ್ನ, ಜನರು ತೆಗೆದುಕೊಂಡು ಹಿಂಸಾಚಾರ ರೂಪ ಕೊಡುವುದು ಸರಿಯಲ್ಲ. ತನಿಖೆ ನಡೆಯುವಾಗ ಸೂಕ್ಷ್ಮತೆ ಕಾಪಾಡೋದು ಎಲ್ಲರ ಜವಾಬ್ದಾರಿ.
ಕೆಲವು ಸಂಸ್ಥೆಗಳು, ಜನರು, ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇದರ ಬಗ್ಗೆ ಪ್ರಸಾರ ಮಾಡಬಾರದು ಅಂತಾ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಯಾರ ಬಗ್ಗೆ ಆದರೂ ಸುಳ್ಳು ಸುದ್ದಿ ಮಾಡಬಾರದು. ಸರ್ಕಾರದಿಂದ ಮಿಸ್ ಇನ್ಫರ್ಮೇಶನ್ ಬಿಲ್ ತರುತ್ತಿದ್ದೇವೆ. ಕಾನೂನನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ಇಲ್ಲ ಅಂತಾ ಪ್ರಿಯಾಂಕ್ ಹೇಳಿದ್ರು.