ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೇ, ರಾಜಕೀಯ ಪಕ್ಷಗಳು ಫುಲ್ ಆ್ಯಕ್ಟೀವ್ ಆಗಿವೆ. ಇದೀಗ ಬಿಹಾರದ ರಾಜಕೀಯ ಸುದ್ದಿ ಒಂದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. 15 ಸೀಟುಗಳನ್ನು ನೀಡದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೂಸ್ತಾನ್ ಆವಾಮ್ ಮೋರ್ಚಾ ಘೋಷಣೆ ಮಾಡಿದೆ. ಬಿಹಾರ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ, ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷ ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ವಿಚಾರವು ಗಂಭೀರ ಚರ್ಚೆಯಾಗಿ ಬದಲಾಗಿದೆ.
ಈ ಗಲಾಟೆಯಲ್ಲಿ, ಎನ್ಡಿಎ ಮೈತ್ರಿಕೂಟದ ಅಂಗಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ HAM ಪಕ್ಷವು 15 ಕ್ಷೇತ್ರಗಳನ್ನು ನೀಡದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪಕ್ಷದ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ನಾವು ನಮ್ಮ ಗೆಲುವನ್ನು ಖಚಿತಪಡಿಸುತ್ತೇವೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮಗೆ 15 ಸೀಟುಗಳನ್ನು ಬಿಟ್ಟುಕೊಡಬೇಕು.
ಒಂದು ವೇಳೆ ಈ ಬೇಡಿಕೆಯನ್ನು ಈಡೇರಿಸದಿದ್ದರೆ, ಪಕ್ಷ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಧು ಜಿತ್ ರಾಮ್ ಮಾಂಝಿ ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಅಧಿಕೃತ ಎಕ್ಸ್ ಅಕೌಂಟ್ ಪೋಸ್ಟ್ನಲ್ಲಿ ಪೌರಾಣಿಕ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಯಾವುದೇ ಕಾರಣಕ್ಕೂ ಎನ್ಡಿಎ ಮೈತ್ರಿಕೂಟ ತ್ಯಜಿಸುವುದಿಲ್ಲ ಎಂದು ಹೇಳಿರುವ ಜಿತ್ ರಾಮ್ ಮಾಂಝಿ, ರಾಜ್ಯ ಮತ್ತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಎನ್ಡಿಎ ಮೈತ್ರಿಕೂಟದಲ್ಲೇ ಮುಂದುವರೆಯವುದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಹಾರದ ಮಾಹಿ ಮುಖ್ಯಮಂತ್ರಿ ಅವರನ್ನು ಸಮಧಾನಪಡಿಸುವ ಜವಾಬ್ದಾರಿಯನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಹಿಸಲಾಗಿದೆ.
ನಾನು ಮುಖ್ಯಮಂತ್ರಿ ಪಟ್ಟ ಕೇಳುತ್ತಿಲ್ಲ. ನಾನು ಕೇವಲ ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗಬೇಕು ಎಂದಷ್ಟೇ ಕೇಳುತ್ತಿದ್ದೇನೆ ಎಂದಿದ್ದಾರೆ. ಅತ್ತ ಚಿರಾಗ್ ಪಾಸ್ವಾನ್ ಕೂಡ ಈ ಸೀಟು ಹಂಚಿಕೆ ಪ್ರಸ್ತಾವನೆಯಿಂದ ತೃಪ್ತರಾಗಿಲ್ಲ. ಕನಿಷ್ಠ 40 ಸ್ಥಾನಗಳಿಗಾಗಿ ಒತ್ತಾಯಿಸುತ್ತಿರುವ ಚಿರಾಗ್ ಪಾಸ್ವಾನ್, ಜನ ಸ್ವರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಜೊತೆಗಿನ ಮೈತ್ರಿಯ ಸಾಧ್ಯತೆಯನ್ನೂ ಮುಕ್ತವಾಗಿರಿಸಿಕೊಂಡಿದ್ದಾರೆ. ಬಿಹಾರ ರಾಜಕೀಯದಲ್ಲಿ ಈಗ ಪ್ರಶಾಂತ್ ಕಿಶೋರ್-ಚಿರಾಗ್ ಮೈತ್ರಿ ಸಾಧ್ಯತೆ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ.
ವರದಿ : ಲಾವಣ್ಯ ಅನಿಗೋಳ