ಕೆಜಿಎಫ್ನ ಚಾಚಾ ಖ್ಯಾತಿಯ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ರು. ತಮ್ಮ ಕೂದಲಿನಿಂದಲೇ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದ ಹರೀಶ್ ರಾಯ್ಗೆ, ಓಂ ನಂತರ ಕೆಜಿಎಫ್ ಸಿನಿಮಾದಿಂದ ನನಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
ಆದರೆ, ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ 4ನೇ ಹಂತದಲ್ಲಿದ್ದು, ಹೊಟ್ಟೆಗೆ ವ್ಯಾಪಿಸಿದೆ. ಚಿಕಿತ್ಸೆಗೆ ಸುಮಾರು 70 ಲಕ್ಷಕ್ಕೂ ಅಧಿಕ ರೂಪಾಯಿಗಳ ಅಗತ್ಯವಿತ್ತಂತೆ. 1 ಇಂಜೆಕ್ಷನ್ಗೆ 3.55 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತಂತೆ. ಇತ್ತೀಚೆಗೆ ನಟ ಧ್ರುವ ಸರ್ಜಾ ಕೂಡ 11 ಲಕ್ಷ ರೂಪಾಯಿ ನೆರವು ನೀಡಿದ್ದರೆಂದು ಹೇಳಿಕೊಂಡಿದ್ರು.
ಅಪ್ಪನಿಗೆ ಹೀಗಾಯ್ತಲ್ಲ ಅಂತಾ ಮಗ ಕೂಡ, ತನ್ನ ಖರ್ಚನ್ನ ತಾನೇ ನಿಭಾಯಿಸಿಕೊಳ್ಳುತ್ತಿದ್ರಂತೆ. ಪತ್ನಿ ಸ್ಕೂಲ್ನಲ್ಲಿ ಕೆಲಸ ಮಾಡುತ್ತಿದ್ರಂತೆ. ಮೊದಲು ಹರೀಶ್ ರಾಯ್ ಅವರ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇತ್ತು. ಊರಲ್ಲಿ ಸ್ವಂತ ಚಿನ್ನದ ಅಂಗಡಿ ಇಟ್ಟುಕೊಂಡಿದ್ರು. ಚಿತ್ರರಂಗದ ಸೆಳೆತದಿಂದಾಗಿ ಚಿನ್ನದ ಅಂಗಡಿಯನ್ನು ಅಣ್ಣನಿಗೆ ಬಿಟ್ಟುಕೊಟ್ಟು, ಬೆಂಗಳೂರಿಗೆ ಬಂದಿದ್ರು.
ಚಿತ್ರರಂಗ ಬಿಟ್ಟು ಬದುಕುವುದಕ್ಕೆ ನನಗೆ ಆಗಲ್ಲ. ಎಷ್ಟೇ ಕಷ್ಟ ಆದರೂ ನಾನು ಇದರಿಂದ ಹೊರಗೆ ಬರಲ್ಲ. ಗುಣ ಆದರೆ ಮೊದಲು ನಾನು ಬಣ್ಣ ಹಚ್ಚಬೇಕೆಂದು, ಸಂದರ್ಶನವೊಂದ್ರಲ್ಲಿ ಹರೀಶ್ ರಾಯ್ ಹೇಳಿಕೊಂಡಿದ್ರು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಇಂದು 55 ವರ್ಷದ ಹರೀಶ್ ರಾಯ್ ನಿಧನರಾಗಿದ್ದಾರೆ.




