ಭಾರತ ಮತ್ತು ಚೀನಾ ರಾಷ್ಟ್ರಗಳ ಗಡಿಯಲ್ಲಿ ಮತ್ತೆ ಬಿರುಕು ಉಂಟಾಗಿದ್ದು, ನಿನ್ನೆ ನಡೆದ ಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಚೀನಾದ 43 ಸೈನಿಕರನ್ನು ಭಾರತೀಯ ಸೈನಿಕರು ಸದೆಬಡಿದಿದ್ದಾರೆ.
ವಿಶ್ವದ ಗಮನ ಪದೇ ಪದೇ ತನ್ನೆಡೆ ಸೆಳೆಯಲು ಚೀನಾ ಸಾಮಾನ್ಯವಾಗಿ ಇಂಥ ದುರ್ಬುದ್ಧಿ ತೋರಿಸುತ್ತ ಬಂದಿದೆ. ಆದ್ರೆ ಚೀನಾ- ಭಾರತ ಗಡಿ ವಿವಾದ ಇಂದು ನಿನ್ನೆಯದಲ್ಲ ಬದಲಾಗಿ ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಈ ಗಲಾಟೆ ಗೊಂದಲ ನಡೆಯುತ್ತಲೇ ಬಂದಿದೆ.

1914ರಲ್ಲಿ ಶುರುವಾಗಿದ್ದ ಭಾರತ- ಚೀನಾ ಗಡಿವಿವಾದ ಇಂದಿಗೂ ಮುಂದುವರೆದಿದೆ. ಗಡಿಯಲ್ಲಿ ಮ್ಯಾಕ್ ಮಹೋನ್ ರೇಖೆಯಿಂದ ಉಭಯದೇಶಗಳ ನಡುವೆ ಜಗಳ ನಡೆಯುತ್ತಿದೆ.
ಸರ್ ಹೆನ್ರಿ ಮ್ಯಾಕ್ ಮಹೋನ್ ಎಂಬಾತ ಈಸ್ಟ್ ಇಂಡಿಯಾ ಕಂಪನಿಯ ಪ್ರಮುಖ ಹುದ್ದೆಯಲ್ಲಿದ್ದು, ನಂತರ ಬ್ರಿಟೀಷ್ ಆಡಳಿತದಲ್ಲಿದ್ದ ಇಂಡಿಯಾದ ಮಿಲಿಟರಿಯ ಪ್ರಮುಖ ಅಧಿಕಾರಿಗಳನ್ನು ನೇಮಿಸಿದನು. 1914ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ರೇಖೆ ನಿರ್ಧರಿಸಿದ. ಅಲ್ಲದೇ, ಸಿಮ್ಲಾ ಒಪ್ಪಂದದಲ್ಲಿ ಮ್ಯಾಕ್ ಮಹೋನ್ ಪ್ರಮುಖ ಪಾತ್ರವಹಿಸಿದ್ದ.
ಟಿಬೇಟ್, ಚೀನಾ ಒಕ್ಕೂಟದಡಿಯಲ್ಲಿದ್ದರೂ, ದಲಾಯಿಲಾಮಾ ಅವರ ಆಡಳಿತದಲ್ಲಿರುವ ಸ್ವಾಯತ್ತ ಪ್ರದೇಶ ಎಂದು ಘೋಷಿಸಲಾಯಿತು. 1914ರ ಜುಲೈ 3ರಂದು ಮೂರು ದೇಶಗಳ ನಡುವೆ ಒಂದು ಒಪ್ಪಂದವಾಯಿತು. ಇದೇ ಸಿಮ್ಲಾ ಒಪ್ಪಂದ. ಈ ಒಪ್ಪಂದದ ಮೂಲಕ ಭಾರತ – ಚೀನಾ ಗಡಿಗೆ ಎಂಟ್ರಿ ಕೊಟ್ಟಿದ್ದ ಮ್ಯಾಕ್ ಮಹೋನ್, ಗಡಿಯಲ್ಲಿ ತನ್ನದೇ ಹೆಸರಿನಲ್ಲಿ ರೇಖೆ ಎಳೆದು ಹೋದ. ಅದೇ ರೇಖೆಯ ಒಳಭಾಗದಲ್ಲಿರುವ ಅರುಣಾಚಲಪ್ರದೇಶದ ಕೆಲ ಭಾಗಗಳನ್ನ ಚೀನಾ ತಮ್ಮ ಭಾಗವೆಂದು ಹೇಳಿ ಕ್ಯಾತೆ ತೆಗೆದಿದೆ. ಈ ಕಾರಣಕ್ಕೆ ಭಾರತ- ಚೀನಾ ಗಡಿಯಲ್ಲಿ ಪದೇ ಪದೇ ಗಲಾಟೆ ಉಂಟಾಗುತ್ತಿದೆ.