Wednesday, August 6, 2025

Latest Posts

ನಾನು ಸಿಂಗಲ್ ಪೇರೆಂಟ್‌ : ಸುಪ್ರೀಂಗೆ ಪವಿತ್ರಾಗೌಡ ಮನವಿ

- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಮತ್ತೆ ಢವಢವ ಶುರುವಾಗಿದೆ. ನಟ ದರ್ಶನ್‌, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆದಿದ್ದು, ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ.

ಕೊಲೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಆರೋಪಿಗಳ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಪರ ವಕೀಲರು ಆರೋಪಿಗಳ ಜಾಮೀನು ಯಾವ ಕಾರಣಕ್ಕೆ ರದ್ದಾಗಬಾರದೆಂದು ಕಾರಣಗಳನ್ನು ಲಿಖಿತ ರೂಪದಲ್ಲಿ ಸುಪ್ರೀಂಕೋರ್ಟ್‌ಗೆ ನೀಡಿದ್ದಾರೆ.

ಪವಿತ್ರಾ ಗೌಡ ಅವರು ಪ್ರಕರಣದ ಮೊದಲ ಆರೋಪಿ ಆಗಿದ್ದು, ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ಸುಪ್ರೀಂಕೋರ್ಟ್ಗೆ ನೀಡಿರುವ ಕಾರಣಗಳಲ್ಲಿ, ಪ್ರಮುಖವಾಗಿ, ಪವಿತ್ರಾ ಗೌಡ, ಮೃತ ರೇಣುಕಾಸ್ವಾಮಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಘಟನೆ ನಡೆದ ದಿನ ಇತರೆ ಆರೋಪಿಗಳೊಟ್ಟಿಗೆ ಪವಿತ್ರಾ ಗೌಡ ಅವರಿಗೆ ಯಾವುದೇ ಸಂವಹನ ನಡೆದಿಲ್ಲ, ಪವಿತ್ರಾ ಗೌಡ, ರೇಣುಕಾ ಸ್ವಾಮಿಯ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಭಾಗಿ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದಾರೆ.

ರೇಣುಕಾ ಸ್ವಾಮಿ ಕೊಲೆಗೂ ತಮಗೂ ಸಂಬಂಧ ಇಲ್ಲ. ರೇಣುಕಾಸ್ವಾಮಿಯ ಮೃತ ದೇಹದ ಮೇಲಿನ ಗಾಯಗಳು ಪವಿತ್ರಾಗೌಡರಿಂದ ಆಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ನಾನು ಒಬ್ಬಂಟಿ ಪೋಷಕಳಾಗಿದ್ದು ನನಗೆ ೧೦ ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳಬೇಕಿದೆ. ಜೊತೆಗೆ ವಯಸ್ಸಾದ ಪೋಷಕರು ಇದ್ದು, ಅವರಿಗೆ ನಾನೇ ಆಧಾರವಾಗಿದ್ದೇನೆ. ನನಗೆ ಯಾವುದೇ ಕ್ರಿಮಿನಲ್‌ ಹಿನ್ನಲೆ ಇಲ್ಲ. ನನ್ನ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಯಾವುದೇ ಲಿಖಿತವಾಗಿ ನೀಡಿಲಾಗಿಲ್ಲ. ಮಹಿಳೆಯಾಗಿರುವುದರಿಂದ ಜಾಮೀನು ರದ್ದು ಮಾಡುವುದು ಕಠಿಣ ಕ್ರಮವಾಗಲಿದೆ ಎಂದು ಪವಿತ್ರಾ ಗೌಡ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ಹಲವು ತಿಂಗಳುಕಾಲ ಜೈಲಿನಲ್ಲಿ ಕಳೆದರು. ಜೈಲಿಂದ ಹೊರಬಂದ ಬಳಿಕ ಮತ್ತೆ ತಮ್ಮ ಫ್ಯಾಷನ್ ಡಿಸೈನ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡಿದ್ದು, ಫ್ಯಾಷನ್ ಡಿಸೈನಿಂಗ್ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಪವಿತ್ರಾ ಗೌಡ. ಆದರೆ ಈಗ ಮತ್ತೆ ಜಾಮೀನು ರದ್ದಾಗುವ ಭೀತಿ ಅವರಿಗೆ ಎದುರಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss