RSS ನ ಹಾಡು ಹಾಡಿದ್ದಕ್ಕಾಗಿ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿದ ವಿಷಯದ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಧೈರ್ಯ ಮತ್ತು ಸ್ವಾಭಿಮಾನ ಇದ್ದರೆ ಡಿಕೆಶಿ ಕ್ಷಮೆ ಕೇಳಬೇಕಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ನಮಸ್ತೇ ಸದಾ ವತ್ಸಲೆ ಮಾತೃಭೂಮಿ ಎಂಬ ಆರ್ಎಸ್ಎಸ್ ಪ್ರಾರ್ಥನಾ ಗೀತೆಯ ಪ್ರಥಮ ಸಾಲು ತಾಯಿ ಭಾರತಾಂಬೆಯ ವಂದನೆ. ಇದನ್ನು ಉಚ್ಚರಿಸಿದ್ದಕ್ಕೆ ಕ್ಷಮೆ ಕೇಳುವುದು ಯಾವ ನೈತಿಕತೆ? ಇದು ದೇಶದ ಮಣ್ಣಿಗೆ ನಮಸ್ಕಾರ ಮಾಡುವ ಸಂಸ್ಕೃತಿಯ ಅವಮಾನ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲೂ ಈ ಕುರಿತು ಮಾತನಾಡಿರುವ ಅವರು, ತಾಯ್ನೆಲಿಗೆ ನಮಸ್ಕಾರ ಮಾಡುವಂತಹ ಶ್ಲೋಕ ಉಚ್ಚರಿಸಿದ್ದಕ್ಕೆ ಕ್ಷಮೆ ಕೇಳಬೇಕೆಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯಾದರೆ, ಜನರು ಇನ್ನು ಮುಂದೆ ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗೂ? ಅಲ್ಲಿಂದ ಬಂದ ನಾಯಕರಿಗೂ? ಎಂದು ವ್ಯಂಗ್ಯವಾಡಿದರು.
ವಿಧಾನಸೌಧದೊಳಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಿಸಿದವರನ್ನು ರಕ್ಷಿಸುವ ಕಾಂಗ್ರೆಸ್, ತಾಯಿ ಭಾರತಾಂಬೆಗೆ ನಮಸ್ಕಾರ ಮಾಡಿದವರನ್ನು ಅಪರಾಧಿಗಳಂತೆ ನೋಡುತ್ತದೆ. ಇದಕ್ಕಿಂತ ಸ್ಪಷ್ಟವಾದ ದೇಶದ್ರೋಹಿ ಮನೋಭಾವನೆ ಮತ್ತೇನು ಇರಬಹುದು? ಎಂದು ಅವರು ಕಿಡಿಕಾರಿದರು.
ಒಬ್ಬ ನಾಯಕನಿಗೆ ಸ್ವಾಭಿಮಾನ ಮತ್ತು ಧೈರ್ಯ ಇದ್ದರೆ, ಈ nation-first ವಿಚಾರದಲ್ಲಿ ಅವರು ಕ್ಷಮೆ ಕೇಳಬಾರದಿತ್ತು. ಒತ್ತಡ ಇತ್ತು ಅಂದ್ರೆ ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡಬೇಕಿತ್ತು. ದೇಶಕ್ಕೆ ಪ್ರೀತಿ ಇಲ್ಲದವರು ಯಾವತ್ತೂ ಸತ್ಯವಾದ ನಾಯಕರಾಗಲ್ಲ. ‘He who loves not his country can love nothing’ ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಏನನ್ನೂ ಪ್ರೀತಿಸಲಾರ” ಅನ್ನೋದು ಅನ್ವಯಿಸುತ್ತದೆ ಎಂದು ಆರ್. ಅಶೋಕ್ ತೀವ್ರವಾಗಿ ಟೀಕಿಸಿದರು.