ಸಿಎಂ ಹೇಳಿದರೆ ಮಾತು ಮುಗಿದಂತೇ, ಅವರ ಮಾತೇ ಅಂತಿಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸೋಮವಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಒಪ್ಪಿದರೆ ನಾನು ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಮಾತನಾಡಿದರು.
ಸಿಎಂ ಏನು ಹೇಳುತ್ತಾರೋ ಅದನ್ನೇ ನಾವು ಕೇಳುತ್ತೇವೆ. ಅವರ ಮಾತಿನ ಮೇಲೇ ನಂಬಿಕೆ ಇಟ್ಟು ಮುಂದೆ ಸಾಗುತ್ತೇವೆ ಎಂದು ಹೇಳಿದರು. ದೆಹಲಿ ಭೇಟಿಯ ಕುರಿತು ಕೇಳಿದಾಗ ಅವರು ಸ್ಪಷ್ಟನೆ ನೀಡುತ್ತಾ, ನಾನು ನಮ್ಮ ಪಕ್ಷದ ಹಿರಿಯ ನಾಯಕರಾದ ಅಂಬಿಕಾ ಸೋನಿಯವರ ಮನೆಗೆ ಸಂತಾಪ ಸೂಚಿಸಲು ಹೋದೆ. ಅವರ ಪತಿ ನಿಧನರಾದರು. ನಾನು ತಿಹಾರ್ ಜೈಲಿನಲ್ಲಿದ್ದಾಗ ಅವರು ಸೋನಿಯಾಗಾಂಧಿಯವರ ಜೊತೆಯಲ್ಲಿ ಬಂದು ನನ್ನನ್ನು ಭೇಟಿಯಾದರು. ಅಂಬಿಕಾ ಸೋನಿಯವರೊಂದಿಗೆ ನನಗೆ ಆತ್ಮೀಯ ಸಂಬಂಧವಿದೆ. ಅವರು ಎಸ್.ಎಂ. ಕೃಷ್ಣ ಅವರ ಆಡಳಿತಕಾಲದಲ್ಲಿ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು, ನನ್ನ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದರು ಎಂದರು.
ಹೈಕಮಾಂಡ್ ಭೇಟಿಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ ಶಿವಕುಮಾರ್ ಸ್ಪಷ್ಟಪಡಿಸಿದರು. ನಾನು ದಿಲ್ಲಿಗೆ ಹೋಗಿದ್ದ ವಿಚಾರವನ್ನು ಕೆಲಸದ ಮಟ್ಟಿಗೆ ಮಾತ್ರ ಹೇಳಬಲ್ಲೆ. ಉಳಿದಂತೆ ಯಾರು ಬೇಕಾದರೂ ಊಹಾಪೋಹ ಮಾಡಬಹುದು. ಅದು ನನಗೆ ಸಂಬಂಧಪಟ್ಟ ವಿಷಯವೇ ಅಲ್ಲ ಎಂದು ಅವರು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

