ಇತ್ತೀಚಿನ ರಾಜಕೀಯ ವ್ಯವಸ್ಥೆಯಲ್ಲಿ ಒಂದು ವಿಚಿತ್ರ ಪ್ರವೃತ್ತಿ ಬೆಳೆಯುತ್ತಿದೆ. ಪಕ್ಷದ ವರಿಷ್ಠರನ್ನು ಟೀಕಿಸಿದರೆ, ರಾಜಕೀಯ ಜೀವನವೇ ಕೊನೆಯಾಗುವುದು ಎಂಬ ಆತಂಕ ಮನೆ ಮಾಡುತ್ತಿದೆ ಎಂದು ಎಂಎಲ್ಸಿ ವಿಶ್ವನಾಥ್ ಹೇಳಿದ್ದಾರೆ.
ಯಾವುದೇ ರಾಜಕೀಯ ಪಕ್ಷ, ಅದು ಕಾಂಗ್ರೆಸ್ ಆಗಿರಬಹುದು, ಬಿಜೆಪಿ ಆಗಿರಬಹುದು. ಯಾವುದೇ ಪಕ್ಷದ ನಾಯಕರನ್ನು ಟೀಕಿಸುವ ಹಾಕಿಲ್ಲ ಎಂಬಂತಾಗಿದೆ. ಕೆ.ಎನ್ ರಾಜಣ್ಣ ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪವನ್ನು ಪ್ರಶ್ನೆ ಮಾಡಿದಕ್ಕೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಇತ್ತೀಚೆಗಿನ ರಾಜಕೀಯ ವ್ಯವಸ್ಥೆಯು ಪಕ್ಷದ ವರಿಷ್ಠರ ಟೀಕಿಸುವಂತಿಲ್ಲ, ಟೀಕಿಸಿದರೆ ರಾಜಕೀಯ ಜೀವನ ಅಂತ್ಯ ಎಂಬಂತಾಗಿದೆ ಎಂದು ಬಿಜೆಪಿ ಎಂಎಲ್ಸಿ ವಿಶ್ವನಾಥ್ ಅವರು ಟೀಕಿಸಿದ್ದಾರೆ. ನಾನು ಈ ಸದನದ ಸದಸ್ಯ. ಈ ವೇದಿಕೆಯಲ್ಲಿ ನಾನು ಬಾಯ್ತೆರೆದು ಮಾತನಾಡಿದರೆ, ಕೆಲವರು ತಕ್ಷಣ ಎದ್ದು ಮಾತಾಡುತ್ತಾರೆ. ಇದು ಸರಿಯೇನು? ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ಆಪರೇಷನ್ ಕಮಲ ಆಯ್ತಲ್ಲ, ಎಲ್ಲಿದೆ ಪ್ರಜಾಪ್ರಭುತ್ವ ಎಂದು ವ್ಯಂಗ್ಯವಾಡಿದರು. ನಾನು ಯಾವುದೇ ರಾಜಕೀಯ ಪಕ್ಷದ ಬಗ್ಗೆ ಮಾತಾಡುತ್ತಿಲ್ಲ. ರಾಹುಲ್ ಗಾಂಧಿ ದೇಶದ ಕಾಂಗ್ರೆಸ್ ನಾಯಕ, ಅವರ ಹೆಸರನ್ನ ಪ್ರಸ್ತಾಪಿಸಿದರೆ ತಪ್ಪೇನು? ಎಂದು ವಿಶ್ವನಾಥ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ರಾಜಣ್ಣ ವಜಾಗೊಳಿಸುವಂತೆ ರಾಹುಲ್ ಸೂಚನೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಹಿಂದುಳಿದ ವರ್ಗಗಳ ಒಬ್ಬ ನಾಯಕನಾಗಿದ್ದ ನಾಗೇಂದ್ರರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಇದೀಗ ರಾಜಣ್ಣ ಅವರನ್ನ ವಜಾಗೊಳಿಸುವ ಮೂಲಕ ಅವಸರದ ತೀರ್ಮಾನ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ನಾನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ – ಮೂರೂ ಪಕ್ಷಗಳಲ್ಲಿ ಕೆಲಸ ಮಾಡಿದವನು. ನನ್ನ ಝಂಡಾ ಬದಲಾಗಿದೆ, ಆದರೆ ಅಜೆಂಡಾ ಬದಲಾಗಿಲ್ಲ. ಕಾಂಗ್ರೆಸ್ ಈಗ ಸಿದ್ಧಾಂತದ ಮೇಲೆ ನಿಂತಿಲ್ಲ. ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು ಎಂದು ಯಾರೂ ಕೇಳಿರಲಿಲ್ಲ. ಆದರೂ ಯಾವ ಕಾರಣಕ್ಕಾಗಿ ಅವರನ್ನು ತೆಗೆಯಬೇಕಾಯಿತು ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ