ಕೇಂದ್ರ ಸರ್ಕಾರದ ಯೋಜನೆಯೊಂದ್ರಲ್ಲಿ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆಯಂತೆ. ಶಾಸಕ ಸಿಮೆಂಟ್ ಮಂಜು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಬರೋಬ್ಬರಿ 3 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆಯಂತೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾ ವಸತಿ ನೋಡಲ್ ಅಧಿಕಾರಿ ಕೆ.ಎಂ. ರಾಜೇಶ್ ಅಕ್ರಮ ಎಸಗಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಾಗಿದೆ. ರಾಜೇಶ್ ವಿರುದ್ಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ನೋಡಲ್ ಅಧಿಕಾರಿ ರಾಜೇಶ್ ತಲೆಮರೆಸಿಕೊಂಡಿದ್ದಾರೆ. ಆದರೆ, ಈ ಅವ್ಯವಹಾರ ನಡೆಯಲು, ಜಿಲ್ಲಾ ಪಂಚಾಯಿತಿ ಸಿಇಒಯಿಂದ ಕೆಳಹಂತದ ಅಧಿಕಾರಿಗಳವರೆಗೂ ಕಾರಣರಾಗಿದ್ದಾರೆ.
1 ತಿಂಗಳ ಮುಂಚೆಯೇ ರಾಜೇಶ್ ಕಾರ್ಯವೈಖರಿ ಬಗ್ಗೆ, ಜಿಲ್ಲಾ ಪಂಚಾಯಿತಿ ಸಿಇಒಗೆ ತಿಳಿಸಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ಆದ್ರೀಗ ಕೋಟ್ಯಂತರ ರೂಪಾಯಿ ಅಕ್ರಮವಾಗಿದೆ. ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲೇ, ಸುಮಾರು 200 ಫಲಾನುಭವಿಗಳಿಗೆ ವಸತಿ ಮಂಜೂರಾಗಿದೆ. ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡದೇ, ಬೇರೆಯವರಿಗೆ ಹಣ ಮಂಜೂರು ಮಾಡಲಾಗಿದೆ. ಅನರ್ಹ ಫಲಾನುಭವಿಗಳ ಮೂಲಕ ಹಣ ಹೊಡೆಯಲಾಗಿದೆ.
ಅರಸೀಕೆರೆ ತಾಲೂಕಿನಲ್ಲೂ 93 ವಸತಿಗಳನ್ನು ಹಂಚಲಾಗಿದೆ. ಅಲ್ಲೂ ಅವ್ಯವಹಾರ ಆಗಿದೆ. ಹಾಸನ ಜಿಲ್ಲೆಯಲ್ಲಿ ಸುಮಾರು 340ಕ್ಕೂ ಹೆಚ್ಚು ವಸತಿ ಹಂಚಿಕೆ ಅವ್ಯವಹಾರ ನಡೆದಿದೆ ಅಂತಾ, ಸಿಮೆಂಟ್ ಮಂಜು ಆರೋಪಿಸಿದ್ದಾರೆ.

