ಮಿಟರ್ ಬಡ್ಡಿ ದಂಧೆ ಕಡಿಮೆ ಆಗುತ್ತಿದೆ ಎನ್ನುವಷ್ಟರಲ್ಲೇ, ಅಮಾಯಕರನ್ನೇ ಟಾರ್ಗೆಟ್ ಮಾಡಿ ಅಕ್ರಮ ಮಿಟರ್ ಬಡ್ಡಿ ದಂಧೆ, ಜೊತೆಗೆ ಇಸ್ಪೀಟ್ ಆಡಿಸುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಬ್ಬಳ್ಳಿಯ ಗೋಪನಕೊಪ್ಪದ ಸಿದ್ದರಾಮ ನಗರದ ಅಕ್ಷಯ ಕಲ್ಲೊಳ್ಳಿ ಅಲಿಯಾಸ ವಡ್ಡರ್ ಮತ್ತು ಸಚ್ಚಿದಾನಂದ ಉಣಕಲ್ ಅಲಿಯಾಸ ಬಾಬು ಈ ಇಬ್ಬರು ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತ, ಇಸ್ಪೀಟ್ ಅಡ್ಡೆ ಮಾಡಿ ಜೂಜು ಆಡಿಸುತ್ತಿದ್ದಾರೆ.
ಗೋಪನಕೊಪ್ಪ ಮತ್ತು ಉಣಕಲ್ ಹೊರಹೊಲಯದ ಹೊಲಗಳಲ್ಲಿ 15 ರಿಂದ 20 ಮಂದಿ ಕೂಡಿಸಿ ಇಸ್ಪೆಟ್ ದಂಧೆ ಮಾಡಿಸುತ್ತಿದ್ದಾರೆ. ಸ್ಥಳದಲ್ಲೇ ಬಡ್ಡಿಗೆ ಹಣ ಕೊಟ್ಟು ಇಸ್ಪೀಟು ಆಡಿಸುತ್ತಾರೆ. ದಿನಕ್ಕೆ 10% ಚಕ್ರ ಬಡ್ಡಿ ದಂಧೆ ಮಾಡ್ತಿದ್ದಾರೆ. ಇವರ ಬಡ್ಡಿ ದಂಧೆಗೆ ತಿಪ್ಪಣ್ಣ ಮಲಗಾವಿ ಎಂಬುವವರು ಹಿಂಸೆಯಿಂದ ಬಳಲುತ್ತಿದ್ದಾರೆ.
ಇವರ ಬಳಿ ಆತ 50 ಸಾವಿರ ರೂಪಾಯಿ ಸಾಲ ಪಡೆದಿದ್ದ. ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಮಾಡಿ ನಾಲ್ಕೈದು ತಿಂಗಳಲ್ಲಿ 3 ಲಕ್ಷ ರೂಪಾಯಿ ಮಾಡಿದ್ದಾರೆ. ಇವರ ಭಯಕ್ಕೆ 15 ದಿನಕ್ಕೆ 30 ಸಾವಿರ ರೂಪಾಯಿ ಬಡ್ಡಿಯಂತೆ ಎರಡು ವರ್ಷಗಳ ಕಾಲ ತುಂಬಿದ್ರೂ ಬಿಡುತ್ತಿಲ್ಲವಂತೆ. ಈಗ 3 ಲಕ್ಷಕ್ಕೆ 24 ಲಕ್ಷ ಕೊಡಬೇಕೆಂದು ಧಮಕಿ ಹಾಕುತ್ತಿದ್ದಾರಂತೆ. ಹಣ ಕೊಡದೆ ಹೋದ್ರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ತಿಪ್ಪಣ್ಣ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಇವರ ಬಡ್ಡಿ ವ್ಯವಹಾರಕ್ಕೆ ಯಾವುದೇ ಲೈಸನ್ಸ್ ಇಲ್ಲಾ. ಬಡ್ಡಿ ಕೊಡದಿದ್ರೆ ಅವರಲ್ಲಿದ್ದ ವಾಹನ, ಬಂಗಾರ, ಆಸ್ತಿ ಪತ್ರ, ಮನೆಗೆ ಹೋಗಿ ಕುಟುಂಬದವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಇಬ್ಬರು
ಏಳೆಂಟು ವರ್ಷಗಳಿಂದ ಈ ದಂಧೆ ಮಾಡ್ತಾ ಬಂದಿದ್ದಾರೆ. ಸದ್ಯ ಕೇಶ್ವಾಪುರ ಪೊಲೀಸರು ಈ ಆರೋಪಿಗಳ ಬೆನ್ನಿಗೆ ಬಿದ್ದಿದ್ದಾರೆ. ಪೊಲೀಸರು ಇಂತವರನ್ನು ಮಟ್ಟ ಹಾಕಿ, ಸಾರ್ವಜನಿಕರ ವಲಯದಲ್ಲಿ ಶಾಂತಿಯುತ ವಾತಾವರಣ ಮೂಡಿಸಬೇಕಿದೆ.

