www.karnatakatv.net :ತುಮಕೂರು: ಜೆಡಿಎಸ್ ಎಮ್ ಎಲ್ ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಮನೆಗೆ ಎಮ್ ಎಲ್ ಸಿ ಕಾಂತರಾಜು ಭೇಟಿ ಮಾಡಿ ಆತಿಥ್ಯ ಸ್ವೀಕರಿಸಿದ್ದಾರೆ. ಈ ಸುದ್ದಿ ತುಮಕೂರು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ.
ಮೈಸೂರಿನಲ್ಲಿ ಜೆಡಿಎಸ್ ನ ಪ್ರಬಲ ನಾಯಕ ಹಾಗೂ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಹೊಸ್ತಿಲಲ್ಲಿ ನಿಂತಿದ್ದು, ಅದೇ ರೀತಿ ತುಮಕೂರಿನಲ್ಲೂ ಪಕ್ಷಾಂತರ ಪರ್ವದ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಈಗಾಗಲೇ ಕಾಂಗ್ರೆಸ್ ನ ಪರಮೇಶ್ವರ್ ಸೇರಿದಂತೆ ಹಲವರನ್ನ ಭೇಟಿಯಾಗಿರುವ ಕಾಂತರಾಜು ಕಾಂಗ್ರೆಸ್ ರೆಬಲ್ ನಾಯಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮನೆಗೆ ಭೇಟಿ ಕೊಟ್ಟಿರೋದು ಕಾಂಗ್ರೆಸ್ ನತ್ತ ಕಾಂತರಾಜುರಿಗೆ ಒಲವು ತಿರುಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 2023ರ ವಿಧಾನಸಭಾ ಚುನಾವಣೆಗೆ ತುರುವೇಕೆರೆ ಕ್ಷೇತ್ರದಿಂದ ಕಾಂತರಾಜು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ಬೆಮೆಲ್ ಕಾಂತರಾಜು ಕಾಂಗ್ರೆಸ್ ಗೆ ಸೇರ್ಪಡೆಯಾಗೋದನ್ನು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಧಿಕೃತಗೊಳಿಸಿದ್ದಾರೆ.
ಜಿ.ಟಿ.ದೇವೇಗೌಡರಂತೆ ಕಾಂತರಾಜು ಕೂಡ ಕಾಂಗ್ರೆಸ್ ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಿಂದ ಸ್ಪರ್ಧೆ ಮಾಡದ ಕಾರಣ ಆ ಕ್ಷೇತ್ರದಿಂದ ಜಿಟಿ ದೇವೇಗೌಡರು ಸ್ಪರ್ಧಿಸ್ತಾರೆ ಅನ್ನೋ ರಾಜಕೀಯ ಲೆಕ್ಕಾಚಾರದ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ರಿಗಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಅಥವಾ ಮಧುಗಿರಿ ಕ್ಷೇತ್ರವನ್ನ ನಾವು ತ್ಯಾಗ ಮಾಡಲು ಸಿದ್ದರಿದ್ದೇವೆ ಎಂದು ಮತ್ತೊಮ್ಮೆ ಪುನರ್ ಉಚ್ಚರಿಸಿದ್ದಾರೆ.
ಜೆಡಿಎಸ್ ಭದ್ರಕೋಟೆ ಕಲ್ಪತರು ನಾಡಿನ ದಳಪತಿಗಳ ಚಿತ್ತ ಕೈನತ್ತ ನೆಟ್ಟಿದೆ ಎನ್ನಲಾಗಿದೆ. ಈ ರೇಸಿನಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಅವರ ಹೆಸರು ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ದಳಪತಿಗಳು ದಳದಲ್ಲೇ ಇರ್ತಾರಾ. ಕೈ ಪಕ್ಷದ ಕಡೆ ಮುಖ ಮಾಡ್ತಾರಾ.ಕಾಲವೇ ನಿರ್ಧರಿಸಲಿದೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು


