Tuesday, June 17, 2025

Latest Posts

ಸಾರಥ್ಯಕ್ಕೂ ಮುನ್ನ ಸವಾಲು : ನಿಖಿಲ್‌ಗೆ ಬಿಗ್ ಟಾಸ್ಕ್ ನೀಡಿದ ದಳಪತಿಗಳು ; “ಕೈ”ಗೆ ಟಕ್ಕರ್ ಕೊಡಲು ಏನಿದೆ ಜೆಡಿಎಸ್ ವರಿಷ್ಠರ ಪ್ಲಾನ್..?

- Advertisement -

ಬೆಂಗಳೂರು : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಈಗಿನಿಂದಲೇ ಸಿದ್ದತೆಗಳನ್ನು ನಡೆಸುತ್ತಿದೆ. ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಬಳಿಕ, ಇದೀಗ ಮತ್ತೆ ಬೇರು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಪಕ್ಷ ಸಂಘಟನೆ ಹೊಣೆ..

ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಇತ್ತೀಚೆಗೆ ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ, ರಾಜ್ಯ ರಾಜಕೀಯದ ಕಡೆ ಗಮನ ಹರಿಸಲು ಸಾಧ್ಯವಾಗ್ತಿಲ್ಲ. ಕೇಂದ್ರದ ಕೆಲಸಗಳಲ್ಲೇ ಬ್ಯುಸಿ ಇರುವುದರಿಂದ, ರಾಜ್ಯದಲ್ಲಿ ಜೆಡಿಎಸ್​​​ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭಾರೀ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಜೊತೆಗೆ ನಮ್ಮ ಮುಂದಿನ ನಾಯಕ ಯಾರು ಅನ್ನೋ ಗೊಂದಲ ಕಾರ್ಯಕರ್ತರಲ್ಲಿ ಮೂಡಿದೆ.

ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರಿಗೂ ವಯಸ್ಸಾಗಿರುವ ಕಾರಣ, ಅವರಿಂದ ರಾಜ್ಯ ಪ್ರವಾಸ ಸಾಧ್ಯವಾಗುತ್ತಿಲ್ಲ. ಈ ಸಂದರ್ಭವನ್ನೇ ದಾಳವಾಗಿ ಬಳಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ರಾಜ್ಯ ರಾಜಕೀಯದ ಕಡೆ ಹೆಚ್ಚು ಗಮನಹರಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿಕೊಳ್ಳುತ್ತಿದ್ದಾರೆ.

90 ಕ್ಷೇತ್ರಗಳಲ್ಲಿ ಯುವ ನಾಯಕ ನಿಖಿಲ್ ಪ್ರವಾಸ..

ಇದರ ಮೊದಲ ಭಾಗವಾಗಿ ಜನರೊಂದಿಗೆ ಜನತಾದಳ ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯತಂತ್ರಗಳನ್ನು ಹಂತ ಹಂತವಾಗಿ ರೂಪಿಸಲಾಗುತ್ತಿದೆ. ಆರಂಭಿಕವಾಗಿ ಒಟ್ಟು 58 ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸಕ್ಕೆ ಮುಂದಾಗಿದ್ದು, ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. 90 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ನಿಖಿಲ್ ಪಕ್ಷದ ಕಾರ್ಯಕರ್ತರನ್ನು ಖುದ್ದಾಗಿ ಭೇಟಿಯಾಗಲಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷದ ಬಲವರ್ಧನೆಗೆ ಪಣ ತೊಟ್ಟಿದ್ದಾರೆ.

ಜೆಡಿಎಸ್ ಮುಂದಿನ ರಾಜ್ಯಾಧ್ಯಕ್ಷ ನಿಖಿಲ್!?

ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿಯವರ ದಾರಿಯನ್ನು ಸುಲಭ ಮಾಡಿಕೊಡುವ ಲೆಕ್ಕಾಚಾರ ಹಾಕಿಕೊಂಡಂತೆ ಕಾಣ್ತಿದೆ. ಹೀಗಾಗಿಯೇ ಜೆಡಿಎಸ್ ವರಿಷ್ಠರು ಒಂದೊಂದಾಗೇ ಪಕ್ಷದ ಸಂಘಟನಾ ಜವಾಬ್ದಾರಿಯನ್ನು ಯುವ ನಾಯಕ ನಿಖಿಲ್ ಕುಮಾರಸ್ವಾಮಿಗೆ ವಹಿಸುತ್ತಿದ್ದಾರೆ ಎನ್ನಲಾಗ್ತಿದೆ.

60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ಗುರಿ, ದೋಸ್ತಿ ಕಂಟಿನ್ಯೂ – ಜೆಡಿಎಸ್ ವಿನ್ನಿಂಗ್ ಸ್ಟ್ರ್ಯಾಟಜಿ!..

ಈಗಾಗಲೇ ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಜೆಡಿಎಸ್, ದೋಸ್ತಿಯನ್ನು ಮುಂದುವರೆಸಿಕೊಂಡು ಹೋಗುವ ಒಲವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 60ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇನ್ನು, ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್​​ ಪಕ್ಷವನ್ನು ಬಲಿಷ್ಠಗೊಳಿಸಿ, ಚುನಾವಣೆಗೆ ಸಿದ್ಧಗೊಳಿಸಿ. ಮುಂದಿನ ಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಮೂಡಿಸಿ. ಕೇಂದ್ರ ವರಿಷ್ಠರ ಮನವೊಲಿಸಿ ಟಿಕೆಟ್ ಕೊಡಿಸುವ ಜಬಾವ್ದಾರಿ ನನ್ನದು ಅಂತಾ ಕಾರ್ಯಕರ್ತರಿಗೆ ಭರವಸೆ ತುಂಬಿದ್ದಾರೆ. ಈ ನಿಟ್ಟಿನಲ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಪಕ್ಷ ಸಂಘಟನೆ ಹೊಣೆ ಹೊರಿಸಿದ್ದಾರೆ.

- Advertisement -

Latest Posts

Don't Miss